ತುಮಕೂರು: ನಗರದಲ್ಲಿ ಪುಟ್‌ಪಾತ್ ಒತ್ತುವರಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಇಂದು ಜೆ.ಸಿ. ರಸ್ತೆಯಲ್ಲಿ ಇದ್ದಂತಹ ಬೀದಿಬದಿ ಮತ್ತು ಪುಟ್‌ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. ಬೀದಿಬದಿ ವ್ಯಾಪಾರಿಗಳು ಪುಟ್‌ಪಾತ್‌ಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಹಣ್ಣು, ಹೂ, ತರಕಾರಿ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಇಂದು ಕ್ರಮ ಕೈಗೊಂಡರು.

ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿದರು. ಈ ವೇಳೆ ಅಂಗಡಿಗಳನ್ನು ತೆರವುಗೊಳಿಸುವುದಕ್ಕೆ ಬೀದಿಬದಿ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಪಾಲಿಕೆ ಅಧಿಕಾರಿಗಳು ಹಾಗೂ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ಸಹ ನಡೆಯಿತು.

ಕಳೆದ ಒಂದು ವಾರದಿಂದ ಪುಟ್‌ಪಾತ್ ತೆರವು ಮಾಡುವಂತೆ ವ್ಯಾಪಾರಿಗಳಿಗೆ ಪಾಲಿಕೆ ಮುನ್ಸೂಚನೆ ನೀಡಲಾಗಿದೆ, ಅಲ್ಲದೇ ಬೀದಿ ಬದಿ / ಪುಟ್‌ಪಾತ್ ವ್ಯಾಪಾರಿಗಳಿಗಾಗಿ ನಿರ್ಮಿಸಲಾಗಿರುವ ವೆಂಡರ್ ಝೋನ್‌ಗೆ ತೆರಳಿ ವ್ಯಾಪಾರ ನಡೆಸುವಂತೆ ಪಾಲಿಕೆ ಸೂಚನೆಯನ್ನೂ ಸಹ ನೀಡಿದೆ. ಆದರೆ, ಪಾಲಿಕೆ ಆದೇಶವನ್ನು ಪಾಲಿಸದೇ ಹಾಲಿ ಇರುವ ಸ್ಥಳಗಳಲ್ಲೇ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ವ್ಯಾಪಾರಿಗಳು ಪಟ್ಟು ಹಿಡಿದರು, ಕೆಲವು ವ್ಯಾಪಾರಿಗಳು ಶೆಡ್‌ಗಳನ್ನು ನಿರ್ಮಿಸಿ ಪುಟ್‌ಪಾತ್‌ಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿರುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದರೂ ಸಹ ತೆರವುಗೊಳಿಸದೇ ಇದ್ದ ಪರಿಣಾಮ ಇಂದು ಅನಿವಾರ್ಯವಾಗಿ ಅವುಗಳನ್ನು ತೆರವುಗೊಳಿಸಲಾಯಿತು.

ನಂತರ ಬೀದಿ ಬದಿ ಮತ್ತು ಪುಟ್‌ಪಾತ್ ತೆರವುಗೊಳಿಸಿ ವೆಂಡರ್ ಝೋನ್‌ಗೆ ತೆರಳಲು ವ್ಯಾಪಾರಿಗಳು ಒಂದು ವಾರ ಕಾಲಾವಕಾಶ ನೀಡುವಂತೆ ಸ್ಥಳಕ್ಕೆ ಆಗಮಿಸಿದ್ದ ಕಾಂಗ್ರೆಸ್ ಮುಖಂಡರುಗಳಾದ ಇಕ್ಬಾಲ್ ಅಹಮ್ಮದ್, ಖುದ್ದೂಸ್ ಅಹಮ್ಮದ್, ನಯಾಜ್ ಸೇರಿದಂತೆ ವಿವಿಧ ಮುಖಂಡರ ನೇತೃತ್ವದಲ್ಲಿ ಪುಟ್‌ಪಾತ್ ವ್ಯಾಪಾರಿಗಳಿಗೆ ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವಲ್ಲಿ ಯಶಸ್ವಿಯಾದರು. ಅದರಂತೆ ಪಾಲಿಕೆ ಆಯುಕ್ತರ ಸೂಚನೆಯ ಮೇರೆಗೆ ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳು ವ್ಯಾಪಾರಿಗಳಿಗೆ ಒಂದು ವಾರ ಕಾಲಾವಕಾಶ ನೀಡಿದರು.

ಈ ವೇಳೆ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್, ಪಾಲಿಕೆ ಮಾಜಿ ಸದಸ್ಯ ನಯಾಜ್ ಅಹಮದ್, ಪ್ರೂಟ್ಸ್ ಯುನಿಯನ್ ಅಧ್ಯಕ್ಷ ಖುದ್ದುಸ್ ಅಹಮದ್ ಸೇರಿದಂತೆ ಸ್ಥಳೀಯ ಬೀದಿ ವ್ಯಾಪಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here