
ಬೆಂಗಳೂರು: ಮಾನ್ಯ ಡಿ.ಕೆ.ಶಿವಕುಮಾರ್ ಅವರು ನೂತನ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಶುಭ ಸಂದರ್ಭದಲ್ಲಿ, ರಾಜ್ಯ ಒಕ್ಕಲಿಗರ ಅಧೀನ ಸಂಸ್ಥೆ ನಗರದ ಪ್ರಸಿದ್ಧ ಕೆಂಪೇಗೌಡ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಹಣ್ಣು-ಹಂಪಲು ಹಾಗೂ ಸಿಹಿ ವಿತರಿಸುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.
ಆಸ್ಪತ್ರೆ ವೈದ್ಯಾಧಿಕಾರಿ ಡಾ.ಎಲ್.ಮಧುಶಂಕರ್ ಆಸ್ಪತ್ರೆಯ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ, ದಾಖಲಾಗಿರುವ ನೂರಾರು ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿ ಮಾತನಾಡಿದ ಅವರು, ಚಿಕಿತ್ಸೆ ಪಡೆಯುತ್ತಿರುವ ವೃದ್ಧರು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ತ್ವರಿತವಾಗಿ ಚೇತರಿಕೆಯಾಗಲಿ. ನೂತನ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯವು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ವೆಂಕಟರಾಮೇಗೌಡ ಮಾತನಾಡಿ, ನಮ್ಮ ನೆಚ್ಚಿನ ನಾಯಕರಾದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿರುವುದು ನಾಡಿನ ಜನತೆಗೆ ಹೆಮ್ಮೆಯ ಸಂಗತಿ. ಅವರ ಅಧಿಕಾರಾವಧಿಯಲ್ಲಿ ಬಡವರ, ಶೋಷಿತರ ಹಾಗೂ ಅನಾರೋಗ್ಯ ಪೀಡಿತರ ಕಲ್ಯಾಣಕ್ಕಾಗಿ ಆಸ್ಪತ್ರೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಸಿಗಲಿದೆ ಎಂಬ ಭರವಸೆ ನಮಗಿದೆ ಎಂದು ತಿಳಿಸಿದರು.
ರಾಜ್ಯ ಒಕ್ಕಲಿಗರ ಸಂಘ ಎಂಪ್ಲಾಯೇಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಿ. ಎನ್. ಗಿರೀಶ್ ಮಾತನಾಡಿ, ಈಗಾಗಲೇ ಡಿ.ಕೆ. ಶಿವಕುಮಾರ್ ರವರು ಹಿಂದೆ ಉಪ ಮುಖ್ಯಮಂತ್ರಿಗಳಾಗಿದ್ದಂತಹ ಸಂದರ್ಭದಲ್ಲಿ ನಮ್ಮ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದ ಸುಮಾರು 88 ಕೋಟಿಯಷ್ಟು ಬಾಕಿ ಉಳಿದಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬಡ್ಡಿಯನ್ನು ಮನ್ನಾ ಮಾಡಿ ನಮ್ಮ ಸಮುದಾಯ ಮತ್ತು ಸಂಘಕ್ಕೆ ಸಹಾಯ ನೀಡುತ್ತಾರೆ. ಪ್ರಸ್ತುತ ಶ್ರೀಯುತರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಹಾಗೆಯೇ ನಮ್ಮ ಸಮುದಾಯಕ್ಕೂ ಸಹ ತಮ್ಮ ಸಹಾಯವನ್ನು ಸರ್ಕಾರದಿಂದ ನೀಡುತ್ತಾರೆಂದು ಭಾವಿಸಿ ಅವರಿಗೆ ಭಗವಂತ ಹೆಚ್ಚಿನ ಶಕ್ತಿಯನ್ನು ಕೋರಿಕೊಂಡರು.

ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಮುರಳಿ, ಅಸೋಸಿಯೇಷನ್ ಅಧ್ಯಕ್ಷ ಡಾ.ಪ್ರಸನ್ನಕುಮಾರ್, ಉಪಾಧ್ಯಕ್ಷ ಬಿ.ಜಯರಾಮ, ಪ್ರಧಾನ ಕಾರ್ಯದರ್ಶಿ ಸಿ.ಎನ್.ಗಿರೀಶ್, ಹೆಚ್.ಸಿ.ಚಂದ್ರ, ಕಿರಣ್, ಶುಶ್ರೂಷಕ ಪ್ರಭಾರ, ಅಧೀಕ್ಷಕರಾದ ಭಾಗೀರತಿ, ಬಾಲಕೃಷ್ಣ, ಸುರೇಶ್, ಪವನ್, ಶ್ರೀನಿವಾಸ್, ಸಾಗರ್ ಹಾಗೂ ಸಿಬ್ಬಂದಿಗಳು ಇತರರು ಇದ್ದರು.






