
ಗುಬ್ಬಿ: ಕುಡಿಯುವ ನೀರಿಗೆ ತೊಂದರೆ ಕಂಡು ಬಂದರೆ ತ್ವರಿತವಾಗಿ ಬಗೆಹರಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕರಾದ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಅಡಗೂರು ಕಾಲೋನಿ, ಸಿಂಗೋನಹಳ್ಳಿ, ನಿಟ್ಟೂರು,ತಗ್ಗಿಹಳ್ಳಿ,ಹರದಗೆರೆ ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಕಾವೇರಿ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮದ ವತಿಯಿಂದ
ಅದಾಂಜು 8.35 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ ಎನ್ ಹೊಸಹಳ್ಳಿಯಲ್ಲಿ ನೀರಿನ ಸಮಸ್ಯೆ ಕಂಡು ಬಂದಿದ್ದು ಆ ಗ್ರಾಮಕ್ಕೆ ತಕ್ಷಣ ಕೊಳವೆ ಬೋರ್ ಕೊರೆಸುವುದಾಗಿ ತಿಳಿಸಿದ್ದೇನೆ.
ಎಲ್ಲಿಯಾದರೂ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಅಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಕ್ರಮ ಕೈಗೊಂಡು ಟ್ಯಾಂಕರ್ ಮೂಲಕ ನೀರನ್ನು ಹೊಡೆಸಲಾಗುತ್ತದೆ.

ಮಾರ್ಚ್ 18 ರಿಂದ ಆರಂಭವಾಗಲಿರುವ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ತಾಲ್ಲೂಕಿನಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಲ್ಲಾ ಪರೀಕ್ಷೆ ಕೇಂದ್ರಗಳಿಗೂ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ವಸತಿ ನಿಲಯದಿಂದ ಹಾಗೂ ದೂರದ ಊರುಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆಯನ್ನು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಫಲಿತಾಂಶ ಸುಧಾರಣೆಗಾಗಿ ಈಗಾಗಲೇ ಎರಡು ಬಾರಿ ಮುಖ್ಯ ಶಿಕ್ಷಕರು, ಪ್ರಾಂಶುಪಾಲರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ಕಳೆದ ವರ್ಷ ತಾಲ್ಲೂಕು ಫಲಿತಾಂಶದಲ್ಲಿ ಐದನೇ ಸ್ಥಾನಕ್ಕೆ ಬಂದಿದ್ದರು, ಈ ಬಾರಿ ಉತ್ತಮ ಫಲಿತಾಂಶ ಸಾಧಿಸುವ ವಿಶ್ವಾಸವಿದೆ ಎಂದು ಹೇಳಿದರು.

ಇರಾನ್ ಯುದ್ಧದ ಪರಿಣಾಮ ಗಲ್ಫ್ ರಾಷ್ಟ್ರಗಳಿಂದ ಕಚ್ಚಾ ತೈಲ ಆಮದು ಕಡಿಮೆಯಾಗಿರುವುದರಿಂದ ಕಚ್ಚಾ ತೈಲಗಳು ಬಾರದೆ ಇರುವುದರಿಂದ ಇಡಿ ಪ್ರಪಂಚಕ್ಕೆ ಆಭಾವ ಉಂಟಾಗಿದೆ. ಕೇಂದ್ರ ಸರ್ಕಾರ ರಷ್ಯಾದಿಂದ ಆಮದು ಹೆಚ್ಚಿಸಲು ಕ್ರಮ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಅಭಾವ ಕಡಿಮೆಯಾಗಲಿದೆ.ನಮ್ಮ ರಾಜ್ಯಕ್ಕೆ ಸಾಕಾಗುವಷ್ಟು 30 ಲಕ್ಷ ಲೀಟರ್ ಅನಿಲ ಇರುವುದರಿಂದ ನಮ್ಮ ರಾಜ್ಯಕ್ಕೆ ಅಷ್ಟೇನೂ ಸಮಸ್ಯೆ ಕಂಡು ಬರುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಚನ್ನಬಸವಣ್ಣ, ಕರೇತಿಮ್ಮಯ್ಯ, ಶ್ರೀನಿವಾಸ್, ಭಾಗ್ಯಮ್ಮ, ಮಹದೇವಯ್ಯ, ಮಂಗಳಮ್ಮ, ಗಿರೀಶ್ ಪಿಡಿಒ ಮಂಜಮ್ಮ, ಉಮೇಶ್, ರಂಗರಾಜು, ಇಂಜಿನಿಯರ್ ಗಳಾದ ಸುರೇಶ್, ಮಹೇಶ್, ಗುತ್ತಿಗೆದಾರರಾದ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಹಾಗೂ ಸ್ಥಳೀಯ ಮುಖಂಡರು ಇತರರು ಇದ್ದರು.





