ತುಮಕೂರು : ಭಾರತ ದೇಶವನ್ನು ಅನೇಕ ರಾಜ ಮನೆತನಗಳು ಆಳಿದ ಇತಿಹಾಸವಿದೆ ಶೋಷಿತ ಸಮುದಾಯದ ರಾಜನೊಬ್ಬ ಮೇಲ್ಜಾತಿಗಳ ನಾಯಕತ್ವ ವಹಿಸಿ ದಕ್ಷಿಣ ಭಾಗದ ಸಂಜೀವಿನಿ ಕ್ಷೇತ್ರ, ಸುವರ್ಣ ಗಿರಿ ಸಿದ್ದರಬೆಟ್ಟ ಸಂಸ್ಥಾನದ ಮಹಾರಾಜರಾಗಿ, ಪ್ರಪಂಚದಲ್ಲೆ‌ ಮೊಟ್ಟ ಮೊದಲಿಗೆ ಚರ್ಮದ ನಾಣ್ಯಗಳನ್ನ ಚಲಾವಣೆ ಮಾಡಿ ಆಳ್ವಿಕೆ ನಡೆಸಿದ್ದ ಅರಸ ಕುರಂಗರಾಜನ 278ನೇ ಪಟ್ಟಾಭಿಷೇಕ ಮಹೋತ್ಸವವನ್ನು ಕೊರಟಗೆರೆ ಪಟ್ಟಣದ ಎಸ್ ಎಸ್ ಸರ್ಕಲ್ ನಲ್ಲಿ ಮಾದಿಗ ಸಮುದಾಯದ ಮುಖಂಡರು ಸರಳವಾಗಿ ಆಚರಣೆ ಮಾಡಿದರು.

ಸುವರ್ಣಗಿರಿ ಸಂಸ್ಥಾನವನ್ನು ಆಳ್ವಿಕೆ ಮಾಡಿದ ಮಾದಿಗರ ಮೊದಲ ಅರಸು ಕೊರಂಗರಾಜನ ಪ್ರತಿಮೆಗೆ ಮಾದಿಗ ಸಮುದಾಯದ ಮುಖಂಡರಾದ ತುಂಬಾಡಿ ರಾಮಣ್ಣ ಪ್ರಾಧ್ಯಾಪಕರಾದ ಡಾ. ಓ ನಾಗರಾಜು ಸಂಶೋಧಕ, ವಿಮರ್ಶಕ ರವಿಕುಮಾರ್ ನೀಹ, ಮಾದರ್ ಮಹಾಸಭಾದ ಮುಖಂಡರುಗಳಾದ ದಾಡಿ ವೆಂಕಟೇಶ್ ವಿಭೂತಿ ಸಿದ್ದಪ್ಪ ಸೇರಿದಂತೆ ವಿವಿಧ ಮಾದಿಗ ಸಮುದಾಯದ ಮುಖಂಡರುಗಳ ನೇತೃತ್ವದಲ್ಲಿ ಮಹಾರಾಜನಿಗೆ ಪುಷ್ಪಾರ್ಚನೆಯನ್ನು ಮಾಡಿ 278ನೇ ಪಟ್ಟಾಭಿಷೇಕವನ್ನು ನೆನಪಿಸಿ ಗೌರವವನ್ನು ಸಲ್ಲಿಸಲಾಯಿತು.

ಕರ್ನಾಟಕದ ದಕ್ಷಿಣ ಭಾಗದಲ್ಲಿ ಕೊರಂಗರಾಜನ ಅಸ್ತಿತ್ವವನ್ನು ಪುಸ್ತಕದ ರೂಪದಲ್ಲಿ ತಂದು ನಾಡಿಗೆ ಪರಿಚಯಿಸಿದ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ. ಓ ನಾಗರಾಜ್ ಅವರು ಮಾತನಾಡಿ ಕೊರಂಗರಾಜ ತಳ ಸಮುದಾಯದ ಅಸ್ಮಿತೆಯಾಗಿದ್ದು ಇವರ ಈ ಪಟ್ಟಾಭಿಷೇಕದ ಮಹೋತ್ಸವ ಇತಿಹಾಸದಲ್ಲಿ ದಾಖಲಿಸಲಿದ್ದು ಕೊಟಗೆರೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ಸಿದ್ದರಬೆಟ್ಟಕ್ಕೆ ಚಾರಣ ಕೈಗೊಂಡ ಸಂದರ್ಭದಲ್ಲಿ ಕೊರಂಗರಾಜನ ಬಗ್ಗೆ ಕೆಲವು ಮಾಹಿತಿಗಳನ್ನ ತಿಳಿದು ಅಲ್ಲಿನ ಸ್ಥಳೀಯರನ್ನ ಸಂದರ್ಶಿಸಿ ಸುಮಾರು ಒಂದು ವರ್ಷಗಳ ಕಾಲ ಸಂಶೋಧನೆ ನಡೆಸಿ ಕೊರಂಗರಾಜ ವೈಭವ ಎಂಬ ಕಾದಂಬರಿಯನ್ನು ಹೊರ ತರಲಾಯಿತು ಸಿದ್ದರಬೆಟ್ಟದ ಸುತ್ತಮುತ್ತಲಿನ ಗಲ್ಲೆಬಾನಿ, ದೊಡ್ಡಕಾಯಪ್ಪ ದೇವಸ್ಥಾನ ನಿರ್ಮಾಣ, ಚರ್ಮದ ನಾಣ್ಯಗಳ ಚಲಾವಣೆ ಸೇರಿದಂತೆ ಅನೇಕ ಐತಿಹಾಸಿಕ ಸಾಕ್ಷಿಗಳನ್ನು ಇಟ್ಟುಕೊಂಡು ಮಾದಿಗ ಸಮುದಾಯದ ಈ ರಾಜನನ್ನ ನಾಡಿಗೆ ಪರಿಚಯ ಮಾಡಬೇಕು ಎಂಬ ನಿಟ್ಟಿನಲ್ಲಿ ಪುಸ್ತಕದ ರೂಪದಲ್ಲಿ ಹೊರ ತಂದಿದ್ದೇನೆ ಮೇಲ್ಜಾತಿಗಳನ್ನು ಒಲೈಸಿಕೊಂಡು ತಳ ಸಮುದಾಯದ ಸೈನಿಕ ರಾಜನಾಗಿ ಅಂದಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತನ್ನ ಆಡಳಿತದಲ್ಲಿ ತಂದು ಬರಗಾಲ, ಆರ್ಥಿಕ ದುಸ್ಥಿತಿ, ಪ್ರಜಾ ರಕ್ಷಣಾ ಪಾಲನೆ, ಚರ್ಮ ನಾಣ್ಯ ಚಲಾವಣೆ ಸೇರಿದಂತೆ ಅನೇಕ ಪ್ರಾಂತ್ಯಗಳನ್ನ ಅಳಿದ ಈ ರಾಜನ ಇತಿಹಾಸವನ್ನು ಯಾವ ಇತಿಹಾಸಕಾರರು ದಾಖಲಿಸಲಿಲ್ಲ ಆದರೆ ಇಂದಿಗೂ ಜನಪದರ ಬಾಯಲ್ಲಿ ಕುರಂಗರಾಜನ ಆಡಳಿತ ವೈಭವ ಬೆರೆತು ಹೋಗಿದ್ದು ಮಾದಿಗ ಸಮುದಾಯ ಸರ್ಕಾರ ಜನಪ್ರತಿನಿಧಿಗಳು ಇಂತಹ ಐತಿಹಾಸಿಕ ಹಿನ್ನೆಲೆ ಕಾಯಬೇಕಿದೆ ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ, ಸಂಶೋಧಕ ವಿಮರ್ಶಕ, ಲೇಖಕ ಪ್ರಾಧ್ಯಾಪಕರಾದ ಡಾ.ರವಿಕುಮಾರ್ ನೀಹ ಮಾತನಾಡಿ ಶೋಷಿತ ಸಮುದಾಯಕ್ಕೆ ರಾಜನೊಬ್ಬ ಇದ್ದ ಪ್ರತಿದಿನ ದೌರ್ಜನ್ಯಕ್ಕೆ ಒಳಗಾಗುವ ಸಮುದಾಯಕ್ಕೆ ಇತಿಹಾಸವಿದೆ ಎನ್ನುವುದಕ್ಕೆ ಕೊರಟಗೆರೆಯಲ್ಲಿ ಆಚರಿಸಲಾದ ಅರಸು ಕುರಂಗರಾಯನ 278ನೇ ಪಟ್ಟಾಭಿಷೇಕ ಮಹೋತ್ಸವವೇ ಸಾಕ್ಷೀ ಇದನ್ನ ಆಚರಣೆ ಮಾಡಲು ಸಿದ್ದರಬೆಟ್ಟದ ಪ್ರಾಂತ್ಯದಲ್ಲಿ ಸಿಕ್ಕ ಖಡ್ಗದ ಸಹಾಯದಿಂದ ದಿನಾಂಕ ಹೆಸರುಗಳನ್ನು ಸಂಶೋಧಿಸಿ ಅನೇಕ ಬ್ರಾಹ್ಮಣರ ಸಂಖ್ಯಾಶಾಸ್ತ್ರದ ಪ್ರಕಾರ ಮಾಗ ಮಾಸದ 12ನೇ ದಿನ ಶನಿವಾರದಂದು ಕೊರಂಗರಾಜ ಪಟ್ಟಕ್ಜೆ ಏರಿದ ಎಂಬ ಅಂಶವನ್ನು ಅರಿತು ಕೊರಟಗೆರೆಯಲ್ಲಿ 278ನೇ ಪಟ್ಟಾಭಿಷೇಕದ ಮಹೋತ್ಸವವನ್ನು ಆಚರಣೆ ಮಾಡುತ್ತಿರುವುದು ಸಮುದಾಯಕ್ಕೆ ಕೀರ್ತಿ ತಂದಂತಿದೆ ಎಂದು ತಿಳಿಸಿದರು.

ಅರಸು ಕುರಂಗರಾಯ ಈ ಭಾಗದಲ್ಲಿ ಆಳ್ವಿಕೆ ಮಾಡಿದ್ದ ಎನ್ನುವುದಕ್ಕೆ ಅನೇಕರು ಪುಸ್ತಕಗಳನ್ನ ಬರೆದಿದ್ದಾರೆ ದಾಸ ಸಾಹಿತ್ಯ, ಜನಪದರ ಬಾಯಲ್ಲಿ ಕುರಂಗನ ಆಳ್ವಿಕೆಯ ಇತಿಹಾಸವಿದೆ ಕೋವಿಡ್ ಸಮಯದಲ್ಲಿ ಸಂಶೋಧನೆಯ ಹಿಂದೆ ಬಿದ್ದ ನಮಗೆ ಅನೇಕ ಐತಿಹ್ಯ ಸಾಕ್ಷ್ಯಾಧಾರಗಳು ದೊರೆತಿದ್ದು ಕುರಂಗರಾಜ ಶಿವಭಕ್ತ ಎನ್ನುವುದಕ್ಕೆ ಸಿದ್ಧಾರಬೆಟ್ಟದಲ್ಲಿ ಸ್ಥಾಪನೆಯಾದ ಸಿದ್ದೇಶ್ವರ ಸ್ವಾಮಿ ಸಾಕ್ಷಿಯಾಗಿದೆ ಮೇಲ್ಜಾತಿಯವರು ಕೆಳ ಜಾತಿಯ ನಾಯಕನನ್ನ ಒಪ್ಪಿಕೊಂಡು ರಾಜನನ್ನಾಗಿ ಮಾಡಿರುವುದೇ ಸೋಜಿಗ ವೆನಿಸಿದ್ದು ಸಂಶೋಧನೆಯಿಂದ ಹೊರಹೊಮ್ಮಿದ ಈ ರಾಜನ ವೈಭವವನ್ನು ಮೈಸೂರು ದಸರಾದಲ್ಲಿ ಕೂಡ ವಿಜೃಂಭಿಸಲಾಗಿದ್ದು ಇಂತಹ ರಾಜನ ಸಮುದಾಯಕ್ಕೆ ಸೇರಿದ ಮಾದಿಗ ಸಮುದಾಯದವರು ಮುಂದಿನ ದಿನಗಳಲ್ಲಿ ರಾಜನ ಪಟ್ಟಾಭಿಷೇಕದ ದಿನವನ್ನ ಸರಳವಾಗಿ ಆದರೂ ನೆನಪಿಸಿಕೊಂಡರೆ ಕ್ರಾಂತಿ ಮಾಡಿದ ಕುರಂಗರಾಜನಿಗೆ ಗೌರವ ಸಮರ್ಪಣೆ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಮಾದರ್ ಮಹಾಸಭಾ ತಾಲೂಕು ಅಧ್ಯಕ್ಷ ವಿಭೂತಿ ಸಿದ್ದಪ್ಪ ಅವರು ಮಾತನಾಡಿ ದನ ಕಾಯುವ, ಚಾಕರಿ ಕೆಲಸ ಮಾಡುವ ನಮ್ಮ ಸಮುದಾಯಕ್ಕೆ ಒಬ್ಬ ರಾಜನಿದ್ದ ಎಂಬುದೇ ಹೆಮ್ಮೆಯ ವಿಚಾರ ಇಂದಿಗೂ ಈ ಸಮುದಾಯ ಗಟ್ಟಿಮುಟ್ಟಾಗಿ ರಾಜರಂತೆಯೇ ಬದುಕುತ್ತಿದ್ದೇವೆ ಸವರ್ಣಿಯರಂತೆ ನಾವು ಯಾರನ್ನು ದೌರ್ಜನ್ಯ ಮಾಡುತ್ತಿಲ್ಲ ಆದರೆ ನಮ್ಮ ಸಮುದಾಯ ದುಡಿದ ಶ್ರಮವನ್ನ ಮೇಲ್ಜಾತಿಯವರು ಪಡೆಯುತ್ತಿದ್ದಾರೆ ಎಂದರು.

ಪಟ್ಟಾಭಿಷೇಕ ಮಹೋತ್ಸವದ ಮುಖ್ಯ ರೂವಾರಿ ದಾಡಿ ವೆಂಕಟೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಇತಿಹಾಸವನ್ನು ಅರಿತವನು ಇತಿಹಾಸವನ್ನು ಸೃಷ್ಟಿಸುತ್ತಾನೆ ಹಾಗೆಯೇ ಮಾದಿಗ ಸಮುದಾಯ ದೇವ ದಾನವರಿಂದಲೂ ಸೃಷ್ಟಿಯೊಂದಿಗೆ ಸಮ್ಮೆಳಿತವಾಗಿ ಬಂದಿದೆ ನಮ್ಮಗಳ ಇತಿಹಾಸ ಅಗಣಿತವಾಗಿದ್ದು ಕುರಂಗರಾಜನ ಪಟ್ಟಾಭಿಷೇಕದ ಸವಿನೆನಪಿಗಾಗಿ ರಾಜ ಅರಸು ಕುರಂಗರಾಯನ ಪ್ರತಿಷ್ಠಾನ ಮತ್ತು ಸಹಕಾರ ಸಂಘವನ್ನ ರಚನೆ ಮಾಡಿ ಸಮುದಾಯದ ಶ್ರೇಯೋಭಿವೃದ್ಧಿಗೆ ಪಣತೊಡುವ ತೀರ್ಮಾನವನ್ನು ಕೈಗೊಳ್ಳಲಾಗಿದ್ದು ಇದಕ್ಕೆ ಸಮುದಾಯದ ಯುವಕರು ಚಿಂತಕರು ಪ್ರಜ್ಞಾವಂತರ ಸಹಕಾರ ಅಗತ್ಯವಿದೆ ಮುಂದಿನ 279ನೇ ಕುರಂಗರಾಜನ ಪಟ್ಟಾಭಿಷೇಕ ಮಹೋತ್ಸವವನ್ನು ರಾಜ ನಾಳಿದ ತಾಣ ಕುರಂಕೋಟೆ ತಪ್ಪಲಿನಲ್ಲಿ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ಚಿಕ್ಕರಂಗಯ್ಯ, ದಾಸರಹಳ್ಳಿ ಶಿವರಾಮಯ್ಯ, ಕಲಾವಿದ ದಾಸರಹಳ್ಳಿ ಮಂಜುನಾಥ್, ಕುರಂಗರಾಜ ಸೊಸೈಟಿಯ ವೀರಕ್ಯಾತರಾಯ, ಟೌನ್ ಮಾರುತಿ, ಚಿಂಪುಗಾನಹಳ್ಳಿ ರವಿ ಕುಮಾರ್, ನೇಗಲಾಲ ಸಿದ್ದೇಶ್, ಗಂಗಣ್ಣ, ಬಿದಲೋಟಿ ನಾಗರಾಜ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ರವಿಕುಮಾರ್ ಚಿಂಪುಗಾನಹಳ್ಳಿ

1 COMMENT

LEAVE A REPLY

Please enter your comment!
Please enter your name here