ಗುಬ್ಬಿ : ತಾಲ್ಲೂಕಿನ ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿ.ಹೊಸಹಳ್ಳಿ ಕ್ರಾಸ್ ಹತ್ತಿರ ಜವಳಿ ಇಲಾಖೆಗೆ 20 ಎಕರೆ ಸ್ಥಳ ನೀಡಿದ್ದು, ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿದ್ದಾರೆ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ನಿಟ್ಟೂರು ಮರಿಯಮ್ಮ ದೇವಿ ಆವರಣದಲ್ಲಿ ಗ್ರಾಮೀಣ ಕುಡಿಯಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ನಿಟ್ಟೂರು ಗ್ರಾಮದಲ್ಲಿ ಅಂದಾಜು ರೂ 2.80 ಕೋಟಿ ವೆಚ್ಚದ ಮನೆ ಮನೆಗೆ ನಳ ಸಂಪರ್ಕ ಕಾಮಗಾರಿಗೆ ಗುದ್ದಲಿಪೂಜೆ ಮಾಡಿ ಮಾತನಾಡಿದ ಅವರು, ಗುಡಿ ಕೈಗಾರಿಕೆಗೆ, ಸ್ವಯಂ ಉದ್ಯೋಗ ಹೆಚ್ಚಿಸಿಕೊಳ್ಳಲು ನಿಟ್ಟಿನಲ್ಲಿ ಹಾಗೂ ಮಹಿಳೆಯರಿಗೆ ಗಾರ್ಮೇಂಟ್ ನಿರ್ಮಿಸಿ ಗ್ರಾಮೀಣ ಮಟ್ಟದ ಮಹಿಳೆಯರ ಜೀವನ ಮಟ್ಟವನ್ನು ಉತ್ತಮ ಪಡಿಸುವಲ್ಲಿ ಯೋಜನೆ ರೂಪಿಸಲಾಗಿದೆ.
ಉತ್ತಮ ರೀತಿಯಲ್ಲಿ ನೀರು ಸರಬರಾಜು ಮಾಡಲು ಈ ಗ್ರಾಮಕ್ಕೆ ಎರಡು ಓವರ್ ಹೆಡ್ ಟ್ಯಾಂಕ್ ಅವಶ್ಯಕತೆ ಇದ್ದು ಸ್ಥಳವನ್ನು ಗುರುತಿಸಲು ಪಿಡಿಒಗೆ ಸೂಚಿಸಿದರು.
ಕಿಬ್ಬಳ್ಳಿಕ್ರಾಸ್ ನಲ್ಲಿ ಮೆಘ ಆಸ್ಪತ್ರೆ ಮಾಡುವ ಯೋಜನೆಯ 10 ವರ್ಷ ಹಿಂದೆಯೇ ಎಲ್ಲಾ ಶಾಸಕರು ಅನುಮೋದನೆ ಮಾಡಿದರು. ಬದಲಾಗಿ ಈಗ 300 ಕೋಟಿಗೂ ಹೆಚ್ಚು ವೆಚ್ಚದಲ್ಲಿ ತುಮಕೂರು ನಗರದಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಎಲ್ಲಾ ಶಾಸಕರು ಒಪ್ಪಿರುವುದರಿಂದ ಶೀಘ್ರದಲ್ಲೇ ಮೇಘ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ತಾಲೂಕಲ್ಲಿರುವಂತ ಎಲ್ಲಾ ಮುಜರಾಯಿ ದೇವಸ್ಥಾನಗಳನ್ನು ಮುಜರಾಯಿದ ಇಲಾಖೆ ಅಭಿವೃದ್ಧಿ ಮಾಡುತ್ತಿದ್ದು, ಖಾಸಗಿ ದೇವಾಲಯಗಳಿಗಿಂತ ಮುಜರಾಯಿ ದೇವಸ್ಥಾನಗಳು ಅಭಿವೃದ್ಧಿ ಹೊಂದಿವೆ.
ಖಾಸಗಿ ದೇವಸ್ಥಾನಗಳು ಅವರೇ ನಡೆಸಿಕೊಂಡು ಹೋಗುವುದಾದರೆ ಸರ್ಕಾರದ ಅಭ್ಯಂತರವಿಲ್ಲ. ಆದರೆ ಅಲ್ಲಿನ ಆಡಳಿತ ಮಂಡಳಿಯು ಮುಜರಾಯಿಗೆ ಒಳಪಡಿಸಿ ಎಂದು ಹೇಳಿದಾಗ ಮಾತ್ರ ಮುಜರಾಯಿ ಇಲಾಖೆಗೆ ಒಳಪಡಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು .
ಮನೆ ಮನೆಗೆ ನಳ ಯೋಜನೆಯಲ್ಲಿ ಕಾಮಗಾರಿ ಮಾಡುವಾಗ ಸಿಸಿ ರಸ್ತೆಯನ್ನು ಕಟ್ ಮಾಡಿದ್ದಾರೆ. ಗುತ್ತಿಗೆದಾರರು ಅದಕ್ಕೆ ಸಿಮೆಂಟ್ ಹಾಕಿ ಸರಿ ಮಾಡಿದಾಗ ಮಾತ್ರ ಗ್ರಾಮ ಪಂಚಾಯತಿ ತಮ್ಮ ಸುಬರ್ದಿಗೆ ತೆಗೆದುಕೊಳ್ಳಬೇಕು. ಒಂದು ವೇಳೆ ಕಾಮಗಾರಿ ಪೂರ್ಣಗೊಳ್ಳದೆ ಪಂಚಾಯಿತಿ ಸುಬರ್ದಿಗೆ ಪಡೆದುಕೊಂಡರೆ ಅಂತಹ ಪಿಡಿಒ ರವರನ್ನು ಅಮಾನತ್ತು ಮಾಡಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಒ ಉಮೇಶ್, ಅಧ್ಯಕ್ಷೆ ಮಂಗಳಗೌರಮ್ಮ, ಸದಸ್ಯರಾದ ತಿಮ್ಮಪ್ಪಸ್ವಾಮಿ, ಪುರುಷೋತ್ತಮ, ನರಸಯ್ಯ, ಸಂತೋಷ್, ಗಿರೀಶ್, ಗುತ್ತಿಗೆದಾ ಸುವಾಸ್, ಮುಖಂಡರು, ಸಾರ್ವಜನಿಕರು ಇತರರು ಇದ್ದರು.





