ಆ್ಯಂಕರ್: ಕೆಲಸಕ್ಕೆಂದು ಹೋಗಿದ್ದ ಮಹಿಳೆ ನಿಗೂಢವಾಗಿ ಸಾವನಪ್ಪಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಮಾರಗೊಂಡನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ದಲಿತ ಸಮುದಾಯದ ಚೆನ್ನಮ್ಮ (58) ಮೃತ ಮಹಿಳೆ ಎನ್ನಲಾಗಿದೆ. ಮೂರು ದಿನಗಳ ಹಿಂದೆ ಕೂಲಿ ಕೆಲಸಕ್ಕೆಂದು ಹೋಗಿದ್ದ ಚೆನ್ನಮ್ಮ ಬಳಿಕ ಮನೆಗೆ ವಾಪಸ್ ಬಂದಿರಲಿಲ್ಲ. ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದ್ದರು ಸಿಕ್ಕಿರಲಿಲ್ಲ.
ಇಂದು ಗ್ರಾಮದಲ್ಲಿನ ರಂಗಸ್ವಾಮಿ ಹಾಗೂ ದಯಾನಂದ್ ಎಂಬುವರ ತೋಟದಲ್ಲಿ ಚೆನ್ನಮ್ಮಳ ಮೃತದೇಹ ಅಸಹಜ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತದೇಹದಲ್ಲಿ ಗಾಯದ ಗುರುತುಗಳು ಕಂಡುಬಂದಿದ್ದು, ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯಗಳಿರುವುದು ಪತ್ತೆಯಾಗಿದೆ. ಇದರಿಂದ ಯಾರೋ ದುಷ್ಕರ್ಮಿಗಳು ಚೆನ್ನಮ್ಮಳನ್ನ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಇದೇ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಬಸವರಾಜ್ ಹಾಗೂ ಸಿದ್ದಪ್ಪ ಎಂಬುವರೂ ಈ ಹಿಂದೆ ನಿಗೂಢವಾಗಿ ಮೃತಪಟ್ಟಿದ್ದರು. ಆ ವೇಳೆ ವಿದ್ಯುತ್ ಶಾಕ್ನಿಂದ ಸಾವು ಸಂಭವಿಸಿದೆ ಎಂದು ಪ್ರಕರಣ ಮುಚ್ಚಿಹಾಕಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಈ ಸರಣಿ ನಿಗೂಢ ಸಾವುಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ಮೃತ ಚೆನ್ನಮ್ಮಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಗ್ರಾಮಸ್ಥರು ಹಾಗೂ ದಲಿತ ಮುಖಂಡರು ಒತ್ತಾಯಿಸಿದ್ದಾರೆ.
ಈ ಘಟನೆ ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.





