ಗುಬ್ಬಿ: ಯುವಕರು ಮಾನಸಿಕವಾಗಿ, ಶಾರೀರಿಕವಾಗಿ ಸದೃಢವಾಗಿರಬೇಕು ಎಂಬ ನಿಟ್ಟಿನಲ್ಲಿ ಮ್ಯಾರಥಾನ್ ಗಳನ್ನು ಏರ್ಪಡಿಸಲಾಗುತ್ತದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ. ಪರಮೇಶ್ವರ್ ತಿಳಿಸಿದರು.

ಪಟ್ಟಣದ ವಿವೇಕಾನಂದ ಸ್ಪೋರ್ಟ್ಸ್ ಸ್ಕ್ವೇರ್ ನಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಮ್ಯಾರಥಾನ್, ವಾಕಥಾನ್ 2026ಕ್ಕೆ   ಚಾಲನೆ ನೀಡಿ ಮಾತನಾಡಿದ ಅವರು,ನಾವು ಅಲ್ಲಲ್ಲೇ ಮ್ಯಾರಥಾನ್ ಗಳನ್ನು ಮಾಡಲಾಗುತ್ತಿದೆ. ಬೆಂಗಳೂರು ಮ್ಯಾರಥಾನ್ ಅನ್ನು  ಎನ್ ಜೆ ಎಂದು ಮಾರ್ಪಡಿಸಿ, ಇದರಲ್ಲಿ 10ಕೆ, 5ಕೆ, 3ಕೆ, ಅಂಗವಿಕಲರು, ಹಿರಿಯ ನಾಗರಿಕರು ಮುಂತಾದ ಎಲ್ಲಾ ವಿಧದ ಸಾರ್ವಜನಿಕರು ಭಾಗವಹಿಸುವ ನಿಟ್ಟಿನಲ್ಲಿ ಮಾಡಲಾಗಿದೆ.  ಪ್ರಮುಖವಾಗಿ ಎರಡು ಕಾರಣದಿಂದ ಮ್ಯಾರಥಾನ್ ಮಾಡಲಾಗುತ್ತಿದೆ. ಯುವಕರು ಡ್ರಗ್ಸ್ ಹವ್ಯಾಸಕ್ಕೆ ಮಾರುವಾಗುವುದನ್ನು ನಿಲ್ಲಿಸುವ ದೃಷ್ಟಿಯಿಂದ ಅಥವಾ ಅರಿವು ಮೂಡಿಸುವ ದೃಷ್ಟಿಯಿಂದ. ಯುವಕರು ಮತ್ತೆ ವ್ಯಸನವನ್ನು ಬಿಟ್ಟು ಆರೋಗ್ಯವಂತರಾಗಿ ಚೆನ್ನಾಗಿ ಇರಬೇಕು ಎಂಬ ನಿಟ್ಟಿನಲ್ಲಿ ಮ್ಯಾರಥಾನ್ ನಡೆಸಲಾಗುತ್ತದೆ. ಜನವರಿ 12ನೇ ರಂದು ಬಾಂಬೆ ಮ್ಯಾರಥಾನ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದಕ್ಕೆ ಬೇರೆ ಬೇರೆ ಊರುಗಳಿಂದ ಬಂದು ಭಾಗವಹಿಸಲಿ ಎಂದು ಇಚ್ಛಿಸುತ್ತೇನೆ. ಯುವಕರು ವ್ಯಸನಕ್ಕೆ ಬಲಿಯಾದರೆ ಅವರಿಗೆ  ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ.    ಡ್ರಕ್ಸ್ ದಂಧೆಯಲ್ಲಿ ಭಾಗಿಯಾಗುತ್ತಾರೋ ಅವರಿಗೆ ಜೈಲು ಶಿಕ್ಷೆ ಖಂಡಿತ ಆಗುತ್ತದೆ.

ಸ್ವಾಮಿ ವಿವೇಕಾನಂದರು ನುಡಿಯಂತೆ ಯುವಕರು ದೇಶ ಕಟ್ಟುವ ಶಕ್ತಿ ನಿಮ್ಮಲ್ಲಿದೆ. 28 ವರ್ಷದ ವಯಸ್ಸಿನ ಯುವಕರು ಭಾರತದಲ್ಲಿ ಹೆಚ್ಚಿಗೆ ಇದ್ದಾರೆ. ಅವರು ಈ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇಂದಿನ ಯುವ ಪೀಳಿಗೆ ಹೆಚ್ಚು ಮಾದಕವ್ಯಸನಿಗಳಾಗುತ್ತಿದ್ದು ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು.  ಗುಬ್ಬಿಯು ಕ್ರೀಡೆಯನ್ನು ಉತ್ತೇಜಿಸುವ ತಾಲೂಕು ಆಗಿರುವುದರಿಂದ ಒಂದಲ್ಲ ಒಂದು ರೀತಿಯ ಕ್ರೀಡೆಗಳನ್ನು  ಈ ತಾಲೂಕಿನಲ್ಲಿ ಸಂಘಟನೆ ಮಾಡಲಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ,  ಓಟ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿರಂತರ ಮಾಡಿದಾಗ ಮಾತ್ರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇತ್ತೀಚಿನ ದಿನದಲ್ಲಿ ಹೃದಯಘಾತವು ಹೆಚ್ಚು ಸಂಭವಿಸುತ್ತಿದ್ದು ಪ್ರಮುಖವಾಗಿ ನಾವು ಸೇವಿಸುವ ಆಹಾರ ಕಾರಣವಾಗಿದೆ. ಸೇವಿಸುವ ಆಹಾರ ಜೀರ್ಣವಾಗಬೇಕಾದರೆ ನಿರಂತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಅರುಣ್ ರವರ ಕುಟುಂಬವು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಚಟುವಟಿಕೆಗಳನ್ನು ಮಾಡುತ್ತಿದೆ. ಇನ್ನೂ  ಹೆಚ್ಚು ಕ್ರೀಡಾ ಮತ್ತು ಸಮಾಜಿಕ ಚಟುವಟಿಕೆಗಳನ್ನು ಮಾಡಲಿ ಎಂದು ಹೇಳಿದರು.

ತುಮಕೂರು ಜಿಲ್ಲಾಧಿಕಾರಿ ಶುಭಾಕಲ್ಯಾಣ್ ಮಾತನಾಡಿ, ಜೀವನದಲ್ಲಿ  ಸಮಯ ಅತ್ಯಮೂಲ್ಯವಾದದ್ದು, ಸಮಯದ ಸದುಪಯೋಗ ಮಾಡಿಕೊಂಡು ನಿಮ್ಮ ಹೇಳ್ಗೆಗೆ ಬಳಸಿಕೊಳ್ಳಬೇಕು, ಪ್ರತಿದಿನ ಒಂದು ಗಂಟೆಯಾದರೂ ಆರೋಗ್ಯಕ್ಕೆ ಸಂಬಂಧಿಸಿದಂತೆ ವ್ಯಾಯಾಮ,ಯೋಗ, ಕ್ರೀಡೆ ಮುಂತಾದವುಗಳನ್ನು ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು. ವಿವೇಕಾನಂದ ಸ್ಪೋರ್ಟ್ಸ್ ಒಳ್ಳೆಯ ಕೆಲಸ ಮಾಡಿ ಮ್ಯಾರಥಾನ್ ಮಾಡಿರುವುದು ಆರೋಗ್ಯದ ಕಾಳಜಿಯನ್ನು ಮೆಚ್ಚಬೇಕು ಎಂದರು.

ವಿವೇಕಾನಂದ ಸ್ಪೋರ್ಟ್ಸ್ ಸ್ಕ್ವೇರ್ ಮಾಲೀಕ ಜಿ.ಎಸ್.ಅರುಣ್ ಕುಮಾರ್ ಮಾತನಾಡಿ, ಹೆಚ್ಚು ಜನ ನೊಂದಣಿ ಮಾಡಿಕೊಂಡ ಈ ಕಾರ್ಯಕ್ರಮದಲ್ಲಿ  ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿರುವುದು ಖುಷಿಯಾಗಿದೆ ಇದೇರೀತಿ ಪ್ರತಿ ವರ್ಷ ವಿವೇಕಾನಂದ ಜಯಂತಿಯ ಹಿಂದೆ-ಮುಂದೆ ಭಾನುವಾರ ಈ ಕಾರ್ಯಕ್ರಮವನ್ನು ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಆರ್.ಚಂದ್ರಶೇಖರ್, ಬಿ.ಕೆ.ಶೇಖರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್, ವೃತ್ತ ನಿರೀಕ್ಷಕ ಟಿ.ಆರ್.ರಾಘವೇಂದ್ರ, ತಹಸೀಲ್ದಾರ್ ಬಿ.ಆರತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಆಯೋಜಕರಾದ ಶಿವ ಇರಿಗೇಶನ್ ಮಾಲಿಕ ಕೆ.ಪಿ.ಭರತ್, ಗುರು ಗ್ರೂಪ್ಸ್ ಪ್ರಸನ್ನ ಕುಮಾರ್, ಸ್ಪೂರ್ತಿ ಇನ್ಪ್ರಾ ಮನೋಜ್ ಚಿದಾನಂದ್, ಅಂಬಿಕಾ ಹಾರ್ಡ್ವೇರ್ ಮಾಲಿಕ ಮೋಹನ್. ಸಿ, ಚಾಲುಕ್ಯ ಆಸ್ಪತ್ರೆ ಸಿಇಒ ಡಾ. ಬಿ.ಎಂ.ನಾಗಭೂಷಣ್, ಎಸ್.ಎಫ್.ಎಕ್ಸ್ ಚಾಪ್  ವಿಹಾನ್ ಅಭ್ಯುದಯ,  ವಿವೇಕಾನಂದ ವಿದ್ಯಾಪೀಠದ ಎಂ.ಪಿ ಸಂಗೀತ,  ಚಾಲುಕ್ಯ ನ್ಯೂಸ್ ಪ್ರಸನ್ನ ದೊಡ್ಡಗುಣಿ, ವಿವೇಕಾನಂದ ಇಂಟೀರಿಯರ್ಸ್ ಅಂಡ್ ಗುಬ್ಬಿ ಕ್ರಿಯೇಟಿವ್ ಅಭಿಷೇಕ್, ರಂಗರಾಮು, ಅಚಲ ಹಾಗೂ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು,

LEAVE A REPLY

Please enter your comment!
Please enter your name here