
ಗುಬ್ಬಿ: ಒಳ್ಳೆಯ ಪ್ರಜೆಯನ್ನು ನಿರ್ಮಾಣ ಮಾಡಿದರೆ ಸಮಸ್ಯೆಗಳನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದು ತುಮಕೂರಿನ ಹೈ ಪಾಯಿಂಟ್ ಸಂಸ್ಥಾಪಕರಾದ ಸಿ.ವಿ. ಕೇಶವಮೂರ್ತಿ ತಿಳಿಸಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರಿಯಾ ಇಂಗ್ಲಿಷ್ ಶಾಲೆ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗಳು ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಸತ್ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯ. ಸರ್ಕಾರವು ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಉತ್ತೇಜನ ನೀಡುತ್ತಾ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಾಲೆಗಳು ಕಾರ್ಯನಿರ್ವಹಿಸುಬೇಕು. ವಿದ್ಯಾರ್ಥಿಗಳು ಪುಟ್ಟ ಗ್ರಾಮದಲ್ಲಿ ದೊಡ್ಡ ಕನಸನ್ನು ಇಟ್ಟುಕೊಂಡು ಮುಂದೆ ಸಾಗಬೇಕಾಗಿದೆ. ದೊಡ್ಡ ಗುರಿಯನ್ನು ಇಟ್ಟುಕೊಂಡು ಸಾಗುವುದಕ್ಕೆ ಪೋಷಕರು ವಿದ್ಯಾರ್ಥಿಗಳು ಸಹಕರಿಸಬೇಕು.
ವಿದ್ಯಾಭ್ಯಾಸ, ಆರೋಗ್ಯ, ಒಳ್ಳೆಯ ಹವ್ಯಾಸ ಹಾಗೂ ಸಮಾಜ ಈ ನಾಲ್ಕು ಅಂಶಗಳಿಂದ ಸಾರ್ಥಕ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಅವಕಾಶಗಳನ್ನು ಎಷ್ಟು ಉಪಯೋಗಿಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಯಶಸ್ಸು ನಿರ್ಧಾರವಾಗುತ್ತದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ನಟರಾಜು ಮಾತನಾಡಿ, 43 ವಸಂತಗಳನ್ನು ಮುಗಿಸಿ ಅತ್ಯಂತ ವೈಭವಹಿತವಾಗಿ ವಾರ್ಷಿಕೋತ್ಸವವನ್ನು ನಡೆಸುತ್ತಿರುವ ಪ್ರಿಯಾ ಆಂಗ್ಲ ಶಾಲೆಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಟಾಪರ್ ಬರಲು ತರಬೇತಿ ನೀಡಿದೆ. ಟಾಪರ್ ವಿದ್ಯಾರ್ಥಿಯಿಂದ ಗುಬ್ಬಿ ತಾಲೂಕಿಗೆ ಕೀರ್ತಿಬಂದಿದೆ. ಪ್ರಿಯಾ ಆಂಗ್ಲ ಶಾಲೆಯು ಪ್ರತಿಷ್ಠಿತ ಶಾಲೆ ಎಂಬುವ ಪ್ರಸ್ತಾವನೆಯನ್ನು ನಿರ್ದೇಶಕರ ಕಚೇರಿಗೆ ಕಳಿಸಲಾಗಿದೆ. ಇದು ಅನುಮೋದನೆ ಗೊಂಡರೆ ರಾಜ್ಯದಲ್ಲೇ ಉನ್ನತ ಶಾಲೆಯಾಗಿ ರೂಪುಗೊಳ್ಳುತ್ತದೆ ಎಂದರು.
ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಜಿಸಿ ಕೃಷ್ಣಮೂರ್ತಿ, ಪ್ರಿಯಾ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಪಂಚಾಕ್ಷರಿ, ಅಧ್ಯಕ್ಷ ಜಿ.ಎಸ್.ವಿಶ್ವನಾಥ್, ಉಪಾಧ್ಯಕ್ಷರಾದ ಎಚ್.ಎಸ್.ವಿಜಯಕುಮಾರ್, ನಿರ್ದೇಶಕರಾದ ಶೋಭಾ, ರೂಪ, ಪ್ರೇಮಾ, ಸತೀಶ್.ಟಿ.ಎಸ್., ಅನಿತಾ, ಪ್ರಾಚಾರ್ಯರಾದ ಕೆ.ಪಿ.ಅರುಣಕುಮಾರ್. ಆಡಳಿತ ಅಧಿಕಾರಿ ಜಿ.ಸಿ. ದೀಪಕ್, ಉಪ ಪ್ರಾಚಾರ್ಯರಾದ ಕೆ.ಸಿ.ಜಲಜಾ, ಎಲ್ಲಾ ಶಿಕ್ಷಕ ವರ್ಗದವರು, ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.






