ತುಮಕೂರು: ರೋಟರಿ ತುಮಕೂರು ಹಾಗೂ ಡಾ.ರಾಮ ಮನೋಹರ ಲೋಹಿಯಾ ಆರೋಗ್ಯ ಜೀವನ ಸಂಸ್ಥಾನ ಸಹಯೋಗದಲ್ಲಿ ನಗರದಲ್ಲಿ ಹಮ್ಮಿಕೊಂಡಿರುವ ಒಂದು ವಾರ ಕಾಲ ನಡೆಯುವ ದೈಹಿಕ ಸಮಸ್ಯೆಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಶನಿವಾರ ಆರಂಭವಾಯಿತು.
ನಗರದ ರೋಟರಿ ಬಾಲಭವನ ಆವರಣದಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ತುಮಕೂರು ಅಧ್ಯಕ್ಷ ಡಾ.ಸುದರ್ಶನ್ ಶಿಬಿರ ಉದ್ಘಾಟಿಸಿ ಮಾತನಾಡಿ,ರೋಟರಿಯ ಸೇವಾ ಚಟುವಟಿಕೆಗಳ ಬಗ್ಗೆ ವಿವರಿಸಿ, ಈ ಶಿಬಿರದಲ್ಲಿ ನರರೋಗ ತಜ್ಞ ಡಾ.ವಿಕ್ರಂ ಮಶಾಲ್, ತಜ್ಞ ವೈದ್ಯ ಡಾ.ಆಕಾಶ್ ಶರ್ಮಾ, ರೂಪೇಶ್ ಚೌಧರಿ ಮತ್ತು ಅವರ ತಂಡ ಸಾರ್ವಜನಿಕರಿಗೆ ವಿವಿಧ ದೈಹಿಕ ಸಮಸ್ಯೆಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡುವರು ಎಂದು ಹೇಳಿದರು.
ಬೆನ್ನು ನೋವು, ಭುಜದ ನೋವು, ಮೊಣಕಾಲು ನೋವು, ಸರ್ವಿಕಲ್ ಸ್ಪಾಂಡಿಯೋಲಿಸಿಸ್, ಮಲಬದ್ಧತೆ, ಸಿಯಾಟಿಕ್, ಸ್ನಾಯುಗಳ ನೋವು, ಪಾರ್ಶ್ವವಾಯು ಮತ್ತು ಇನ್ನಿತರ ನೋವುಗಳಿಗೆ ಆಪರೇಷನ್ ಇಲ್ಲದೆ ಚಿಕಿತ್ಸೆ ನೀಡುವರು. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯುವಂತೆ ಕೋರಿದರು.
ರೋಟರಿ ಜಿಲ್ಲಾ ಜಂಟಿ ಕಾರ್ಯದರ್ಶಿ ಸಿ.ನಾಗರಾಜ್ ಮಾತನಾಡಿ, ರೋಟರಿ ಸಂಸ್ಥೆಯ ಸೇವೆ, ಸಫಲತೆ ಬಗ್ಗೆ ತಿಳಿಸಿ, ಹೃದಯ ಸಂಬಂಧಿ, ಸೀಳು ತುಟಿ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಣ್ಣು, ಕಿಡ್ನಿ ಮತ್ತು ಇತರೆ ಪ್ರಮುಖ ಕಾಯಿಲೆಗಳ ಚಿಕಿತ್ಸೆಗೆ ರೋಟರಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದೆ ಎಂದರು.
ಸಮುದಾಯ ಸೇವೆಗಳ ನಿರ್ದೇಶಕಿ ಚಂದ್ರಕಲಾ, ರೋಟರಿ ತುಮಕೂರು ಕಾರ್ಯದಶಿ ಮಲ್ಲೇಶಯ್ಯ, ರೊಟೇರಿಯನ್ಗಳಾದ ಜಯರಾಮ ಶೆಟ್ಟಿ, ಶಿವಕುಮಾರಸ್ವಾಮಿ, ಚಂದ್ರಶೇಖರ್, ನಾಗಮಣಿ, ಅನಿತಾ ನಾಗೇಶ್, ವೀಣಾ ಉಮಾಶಂಕರ್, ರಾಜೇಶ್ವರಿ ರುದ್ರಪ್ಪ, ರಾಧಾ ಮೊದಲಾದವರು ಭಾಗವಹಿಸಿದ್ದರು.





