ರಾಯಚೂರು: ಭಾರತ ಸರ್ಕಾರದ ಮಾನ್ಯ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಇಂದು ಕುಷ್ಟಗಿ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗದಗ-ವಾಡಿ ನೂತನ ರೈಲು ಮಾರ್ಗದ ತಳಕಲ್-ಕುಷ್ಟಗಿ ಭಾಗದ ಉದ್ಘಾಟನೆ ನೆರವೇರಿಸಿ, ಕುಷ್ಟಗಿ-ಎಸ್‌ಎಸ್‌ಎಸ್‌ ಹುಬ್ಬಳ್ಳಿ ಪ್ಯಾಸೆಂಜರ್‌ ರೈಲಿಗೆ ಚಾಲನೆ ನೀಡಿದರು. ಹಾಗೆಯೇ, ಸಿಂಧನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿಣಿಗೇರಾ-ರಾಯಚೂರು ನೂತನ ರೈಲು ಮಾರ್ಗದ ಭಾಗವಾದ ಸಿಂಧನೂರು-ರಾಯಚೂರು ರೈಲು ಮಾರ್ಗ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಗದಗ-ವಾಡಿ ನೂತನ ರೈಲು ಮಾರ್ಗದ 56 ಕಿ.ಮೀ ಉದ್ದದ ತಳಕಲ್-ಕುಷ್ಟಗಿ ನೂತನ ಮಾರ್ಗವನ್ನು ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಕುಷ್ಟಗಿಯಿಂದ ಹುಬ್ಬಳ್ಳಿಗೆ ನೂತನ ಪ್ಯಾಸೆಂಜರ್ ರೈಲಿಗೂ ಚಾಲನೆ ನೀಡಿದರು. ಈ ರೈಲು ಮೇ 16, ಶುಕ್ರವಾರದಿಂದ ಪ್ರತಿ ದಿನ ಬೆಳಿಗ್ಗೆ ಕುಷ್ಟಗಿಯಿಂದ ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಹೊರಡಲಿದೆ.

ಸಿಂಧನೂರಿನ ಕಾರ್ಯಕ್ರಮದಲ್ಲಿ, ಕಾರ್ಯಕ್ರಮದಲ್ಲಿ ಗಿಣಿಗೇರಾ-ರಾಯಚೂರು ನೂತನ ರೈಲು ಮಾರ್ಗದ ಭಾಗವಾದ 84 ಕಿ.ಮೀ ಉದ್ದದ ಸಿಂಧನೂರು-ರಾಯಚೂರು ರೈಲು ಮಾರ್ಗ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ನೇತೃತ್ವದ ನಮ್ಮ ಸರ್ಕಾರ ದೇಶದಾದ್ಯಂತ ರೈಲ್ವೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಹು ಪ್ರಾಮುಖ್ಯತೆಯನ್ನು ನೀಡಿದೆ. ಕರ್ನಾಟಕ ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯದ ಹೆಚ್ಚಳಕ್ಕೆ ಕಾಳಜಿಯುತವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಗದಗ-ವಾಡಿ ನೂತನ ರೈಲು ಮಾರ್ಗ ಮಂಜೂರಾಗಲು ಕಾರಣರಾದ ಅಂದಿನ ಪ್ರಧಾನಿಯಾಗಿದ್ದ ಶ್ರೀ ಹೆಚ್.ಡಿ ದೇವೇಗೌಡರು ಹಾಗೂ ಬಸವರಾಜ ರಾಯರೆಡ್ಡಿಯವರಿಗೆ ಅಭಿನಂದನೆ ಸಲ್ಲಿಸಿದರು. ಈ ಎರಡೂ ನೂತನ ರೈಲು ಮಾರ್ಗಗಳನ್ನು 2027ರಲ್ಲಿ ಮುಕ್ತಾಯಗೊಳಿಸಿ, ಜನತೆಗೆ ರೈಲು ಸೌಲಭ್ಯ ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು. ಮುಂದಿನ 2 ತಿಂಗಳಲ್ಲಿ 50 ವಂದೇ ಭಾರತ್ ಸ್ಲೀಪಿಂಗ್ ರೈಲುಗಳನ್ನು ದೇಶದಾದ್ಯಂತ ಲೋಕಾರ್ಪಣೆಗೊಳಿಸಲಾಗುತ್ತಿದೆ. ಈ ರೈಲನ್ನು ಹೊಸಪೇಟೆ-ಬಳ್ಳಾರಿ ಮಾರ್ಗವಾಗಿ ಬೆಂಗಳೂರಿಗೆ ಓಡಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.

2014-2024ರ ವರೆಗೆ ರೈಲ್ವೆ ಇಲಾಖೆಯಿಂದ 5 ಲಕ್ಷ ಉದ್ಯೋಗಗಳನ್ನು ಒದಗಿಸಲಾಗಿದೆ. ಇದೇ ಮೊದಲ ಬಾರಿಗೆ ಪ್ರಯತ್ನ ಪಟ್ಟು ಕನ್ನಡ ಭಾಷೆಯಲ್ಲಿ ರೈಲ್ವೆ ಪರೀಕ್ಷೆ ನಡೆಸಲು ಅನುಮತಿ ಕೊಡಿಸಿದ್ದೇನೆ. ಮಂಗಳಸೂತ್ರದ ವಿಷಯದಲ್ಲಿಯೂ ಮಹು ಮುತುವರ್ಜಿ ವಹಿಸಿ ದೇಶದ ಸಂಸ್ಕೃತಿ ರಕ್ಷಣೆಗಾಗಿ ಪರೀಕ್ಷೆಗಳಲ್ಲಿ ಮಹಿಳೆಯರು ಮಂಗಳಸೂತ್ರ ಧರಿಸಿ ಪರೀಕ್ಷೆ ಬರೆಸಲು ಅನುಮತಿ ಕೊಡಿಸಲಾಗಿದೆ ಎಂದರು. 10 ಸಾವಿರ ಇಂಜಿನ್ಗಳನ್ನು ಬೇರೆ ಬೇರೆ ರೈಲುಗಳಿಗೆ ಜೋಡಣೆ ಮಾಡಲಾಗುತ್ತಿದೆ. 15 ಸಾವಿರ ಕಿ.ಮೀಗಳಿಗೆ ಕವಚ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸುವ ಕೆಲಸ ರೈಲ್ವೆ ಇಲಾಖೆಯಿಂದ ಆಗುತ್ತಿದೆ ಎಂದರು.

ಇದೇ ವೇಳೆ, ಆಲಮಟ್ಟಿಯಿಂದ ಯಾದಗಿರಿ ಹಾಗೂ ಭದ್ರಾವತಿಯಿಂದ ಚಿಕ್ಕಜಾಜೂರುವರೆಗೆ ಎರಡು ನೂತನ ರೈಲ್ವೆ ಮಾರ್ಗಗಳ ಅಂತಿಮ ಸರ್ವೆ ಮಾಡಲು ರೈಲ್ವೆ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಶೀಘ್ರವೇ ಈ ಸಮೀಕ್ಷೆ ಮುಗಿದು, ರೈಲು ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ, ಹಿಂದುಳಿದ ವರ್ಗಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವರಾಜ ಎಸ್.‌ ತಂಗಡಗಿಯವರು, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಶಾಸಕರಾದ ಶ್ರೀ ಬಸವರಾಜ ರಾಯರೆಡ್ಡಿಯವರು, ಕುಷ್ಟಗಿ ಶಾಸಕರಾದ ಶ್ರೀ ದೊಡ್ಡನಗೌಡ ಎಚ್.‌ ಪಾಟೀಲ್‌ ಅವರು, ಶಿಂಧನೂರಿನ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿಯವರು, ಕೊಪ್ಪಳ ಜಿಲ್ಲಾಧಿಕಾರಿಗಳಾದ ಶ್ರೀ ನಳಿನ್‌ ಅತುಲ್‌, ವಿಧಾನ ಪರಿಷತ್‌ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ ಅವರು, ಮಾಜಿ ಸಚಿವರಾದ ಶ್ರೀ ಹಾಲಪ್ಪ ಆಚಾರ್‌ ಅವರು, ಮಾಜಿ ಸಂಸದರಾದ ಶ್ರೀ ವಿರುಪಾಕ್ಷಪ್ಪ ಅವರು, ಮಾಜಿ ಶಾಸಕರಾದ ಶ್ರೀ ಬಸವರಾಜ ದಡೇಸುಗೂರು, ಶ್ರೀ ಅಮರೇಗೌಡ ಪಾಟೀಲ್‌ ಬಯ್ಯಾಪುರ, ಶ್ರೀ ಪ್ರತಾಪ್‌ ಗೌಡ ಪಾಟೀಲ್‌ ಅವರು, ಡಾ|| ಎಸ್.‌ ಶಿವರಾಜ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯರಾದ ಶ್ರೀ ಬಸನಗೌಡ ಬಾದರ್ಲಿ, ಶ್ರೀ ಶರಣಗೌಡ ಪಾಟೀಲ್‌ ಬಯ್ಯಾಪುರ ಅವರು ಹಾಗೂ ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here