ಚಿಕ್ಕನಾಯಕನಹಳ್ಳಿ:  ಇಂದಿಗೂ ನಮ್ಮ ರಾಜ್ಯದಲ್ಲಿ ಎಲ್ಲ ಸಮುದಾಯಗಳು ತಮ್ಮ ಜಾತಿ, ಧರ್ಮ ನಮೂದಿಸಿ ತಮ್ಮ ಗುರುತನ್ನು ನೀಡಬೇಕೆಂದು ಹೇಳುವ ಸಮಾಜದಲ್ಲಿ, ಅಲೆಮಾರಿ ಸಮುದಾಯಗಳು ನಿರಂತರವಾಗಿ ತಮ್ಮ ಹಕ್ಕುಗಳಿಗಾಗಿ ಕೂಗಿ ಕೇಳುತ್ತಿದ್ದರೆ, ಯಾರಾದರೂ ನಮ್ಮ ಪರವಾಗಿ ಕೇಳುತ್ತಾರೋ? ಎಂಬ ಪ್ರಶ್ನೆ ಅಲೆಮಾರಿ ಸಮುದಾಯವನ್ನು ಕಾಡುತ್ತಿದೆ.

ಅಲೆಮಾರಿ ಸಮುದಾಯಗಳಿಗೆ ಮನೆಯು ಇಲ್ಲ, ವಿದ್ಯುತ್ ಸೌಲಭ್ಯ ಇಲ್ಲ, ವೋಟರ್ ಐಡಿ , ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳೂ ಇಂದಿಗೂ ಇಲ್ಲ. ಇಂದಿಗೂ ಇವರಿಗೆ ಮೂಲಭೂತ ಸೌಕರ್ಯಗಳ ಕೊರತೆಯು ಇದ್ದು, ಮೀಸಲಾತಿ ಹಕ್ಕುಗಳನ್ನೂ ರಾಜ್ಯ ಸರ್ಕಾರವು ಕಸಿದುಕೊಂಡಿದೆ.

ಸಮೀಕ್ಷೆ ಮಾಡುವವರು ಈ ಸಮುದಾಯವನ್ನು ಪರಿಗಣಿಸುತ್ತಾರೋ ಇಲ್ಲವೋ ಎಂಬುದು ಗೊಂದಲದಲ್ಲೇ ಇದೆ. ಮನೆ ಇಲ್ಲದೇ, ನಿವೇಶನ ಇಲ್ಲದೆ ಸಿಕ್ಕಲ್ಲೇ ನೆಲೆನಿಂತು ಟಾರ್ಪಲ್ ಟೆಂಟುಗಳಲ್ಲಿ, ಗುಡಿಸಲುಗಳಲ್ಲಿ, ಜೋಪಡಿಗಳಲ್ಲಿ ವಾಸಿಸುತ್ತಿದ್ದಾರೆ. ವಿದ್ಯುತ್, ಶುದ್ಧ ಕುಡಿಯುವ ನೀರು, ಆಹಾರ, ಶಿಕ್ಷಣ, ಶೌಚಾಲಯ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆ, ಪಡಿತರ ಚೀಟಿ ಎಲ್ಲವೂ ಕನಸಾಗಿಯೇ ಉಳಿದಿದೆ.

ವಿದ್ಯಾಭ್ಯಾಸದ ಹಕ್ಕು ಕೂಡ ಅಲೆಮಾರಿ ಸಮುದಾಯಗಳಿಗೆ ಕನಸಿನಂತಿದೆ. ಬಾಲ್ಯ ವಿವಾಹ, ಬಾಲಕಾರ್ಮಿಕರು, ಭಿಕ್ಷಾಟನೆ ಮಾಡುವವರು, ಹೆಣ್ಣು ಮಕ್ಕಳ ಲೈಂಗಿಕ ಕಿರುಕುಳದಂತಹ ಸಮಸ್ಯೆಗಳು ದಲಿತ ಸಮುದಾಯಗಳಲ್ಲಿ, ವಿಶೇಷವಾಗಿ ಅಲೆಮಾರಿ ಸಮುದಾಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

ಕರ್ನಾಟಕ ರಾಜ್ಯ ಸರ್ಕಾರ ಮೀಸಲಾತಿ ಹಕ್ಕುಗಳನ್ನು ಕಟ್ಟಿ ಹಾಕಿ, ಸಂವಿಧಾನದ ಆಶಯವನ್ನು ನಿರ್ಲಕ್ಷಿಸಿದ್ದು ಸಾಮಾಜಿಕ ನ್ಯಾಯದ ಉಲ್ಲಂಘನೆಯಾಗಿದೆ. ಮತ್ತೊಮ್ಮೆ ಸಮಾಜದ ಪರಿಪೂರ್ಣತೆಯನ್ನು ಒತ್ತಿ ಹೇಳುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಉದಾಸೀನತೆ ಈ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಸಮಾಜ ಕಲ್ಯಾಣ ಇಲಾಖೆ, ಸಮೀಕ್ಷೆ ಮಾಡುವ ಅಧಿಕಾರಿಗಳು ಅಲೆಮಾರಿ ಸಮುದಾಯಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ದಾಖಲೆಗಳು , ಶಿಕ್ಷಣ  ಇಲ್ಲದ ಕಾರಣ, ಈ ಸಮುದಾಯದ ಜನರು ತಮ್ಮ ಹಕ್ಕುಗಳನ್ನು ಪಡೆಯಲು ಯಾವ ಕಡೆ ಹೋಗಬೇಕೆಂಬುದೇ  ತಿಳಿದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು ಸಮಾಜದ ಮುಖ್ಯ ವಾಹಿನಿಗೆ ಬರುವುದಾದರೂ ಹೇಗೆ? ಬಂದಾಗ, ಎಲ್ಲಿ, ಹೇಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು?  ಎಂಬುದು ದೊಡ್ಡ ಪ್ರಶ್ನೆ ಎಂದು ಅಲೆಮಾರಿ ಸಮುದಾಯದ ರಾಜ್ಯ ಕಾರ್ಯದರ್ಶಿ ಶಾಂತರಾಜು ತಮ್ಮ ನೋವನ್ನು ಹೇಳಿದ್ದಾರೆ.

ಅಲೆಮಾರಿ ಸಮುದಾಯಗಳ ಸಮಸ್ಯೆ ಸಿದ್ಧಾಂತಿಕವಾಗಿ ಮಾತ್ರ ಅಲ್ಲ, ವಾಸ್ತವಿಕವಾಗಿ ಬಹಳ ಗಂಭೀರವಾಗಿದೆ. ಮನೆ, ವಿದ್ಯುತ್, ದಾಖಲೆ, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆ ಇಲ್ಲದಿರುವುದು ಅವರಿಗೆ ಜೀವನದ ಮೂಲ ಹಕ್ಕುಗಳನ್ನು ನೀಡದೇ ಸಮಾಜದಿಂದ ಹೊರಗಡೆ ತಳ್ಳುತ್ತಿದೆ. ಸರ್ಕಾರ ಮತ್ತು ಸಾಮಾಜಿಕ ಸಂಸ್ಥೆಗಳು ತಕ್ಷಣ ಕ್ರಮ ಕೈಗೊಳ್ಳದೆ ಇದ್ದರೆ, ಈ ಸಮುದಾಯಗಳ ಹಕ್ಕು-ನ್ಯಾಯ, ಅಭಿವೃದ್ಧಿ ಕನಸು ಮಾತ್ರವಲ್ಲ, ಜೀವನವೇ ಅಪಾಯಕ್ಕೊಳಗಾಗುತ್ತದೆ ಎಂದು ಸಾಮಾಜಿಕ ನ್ಯಾಯದ ಹೋರಾಟಗಾರರು, ಚಿಂತಕರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಎಲ್ಲಾ ಸಮುದಾಯಗಳು, ಜಾತಿಗಳು, ತಮ್ಮ ತಮ್ಮ ಜಾತಿ ನಮೂದಿಸಿ ಧರ್ಮ ನಮೂದಿಸಿ ಎನ್ನುವ ಸಮಾಜದಲ್ಲಿ ಇಂದಿಗೂ ನಾವು ಬದುಕಿದ್ದೇವೆ. ಆದರೆ ನಮ್ಮನ್ನು ಮನುಷ್ಯರೆಂದು  ಗುರುತಿಸಿ ಎಂದು ಅಲೆಮಾರಿ ಸಮುದಾಯಗಳು ಕೂಗಿ ಹೇಳುತ್ತಿವೆ.

ಅಲೆಮಾರಿ ಸಮುದಾಯಗಳ ಅಸಮಾನತೆ: ಮನೆಯಿಲ್ಲ, ವಿದ್ಯುತ್ ದಾಖಲೆ ಇಲ್ಲ, ಮತದಾರರ ಗುರುತಿನ ಚೀಟಿ ಹೊರತು ಪಡಿಸಿ ಮತ್ತೇನು ಇಲ್ಲ. ಸಮಾಜದ ಹೊರನೋಟವಿಲ್ಲ ಇವರನ್ನು ಸಮೀಕ್ಷೆ ಮಾಡುವುದೇ ಸರ್ಕಾರಕ್ಕೆ ಸವಾಲಿನ ಕೆಲಸ.

ವರದಿ: ದೇವರಾಜು.ಆರ್. ಚಿಕ್ಕನಾಯಕನಹಳ್ಳಿ

LEAVE A REPLY

Please enter your comment!
Please enter your name here