
ಗುಬ್ಬಿ : ಮನ್ ಕಿ ಬಾತ್ ಎಂಬುದು ಪ್ರಧಾನಿ ಮೋದಿ ದೇಶದ ಜನತೆಯೊಂದಿಗೆ ನಡೆಸುವ ಸಾಮೂಹಿಕ ಸಂವಾದ ಎಂದು ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಬ್ಯಾಟರಂಗೇಗೌಡ ತಿಳಿಸಿದರು.
ತಾಲೂಕಿನ ನಿಟ್ಟೂರು ಹೋಬಳಿ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಆಯೋಜಿಸಿದ್ದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕೇಳಲು ಎಲ್ಲರೂ ಕಾತುರದಿಂದ ಕಾಯುತ್ತಿರುತ್ತಾರೆ. ಹೊಸ ವಿಷಯಗಳ ಕುರಿತು ಚರ್ಚೆ ನಡೆಸಬಹುದು ಎನ್ನುವ ಕುತೂಹಲ ಪ್ರತಿಯೊಬ್ಬರಲ್ಲಿರುತ್ತದೆ.
ಭಾಷೆ, ಸಂಪ್ರದಾಯ, ವಿಜ್ಞಾನ, ಪರಂಪರೆ, ವಿದೇಶದಲ್ಲಿ ಭಾರತೀಯ ಸಂಸ್ಕೃತಿ, ಅನ್ನದಾತನ ಶ್ರಮ, ನಾರಿಶಕ್ತಿ, ಕ್ರೀಡೆ, ಯುವಕರ ಆಕಾಂಕ್ಷೆ, ಪರಿಸರ ಸಂರಕ್ಷಣೆ, ಯೋಗ, ಆಯುರ್ವೇದ ಮತ್ತು ಸ್ವಚ್ಛತೆಯಂತಹ ವೈವಿಧ್ಯಮಯ ವಿಷಯಗಳನ್ನು ಈ ಕಾರ್ಯಕ್ರಮ ಒಳಗೊಂಡಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್ ಟಿ ಬೈರಪ್ಪ ಮಾತನಾಡಿ, ಅಟಲ್ ಜಿ ಅವರ ನೇತೃತ್ವದಲ್ಲಿ ನಡೆದ ಕೆಲಸಗಳ ಬಗ್ಗೆ, ಕಾರ್ಯ ವೈಖರಿ ಬಗ್ಗೆ ಮಾಹಿತಿ ಕೊರತೆಯಿಂದ ಅಧಿಕಾರವನ್ನು ಕಳೆದು ಕೊಳ್ಳಬೇಕಾಯಿತು. ಆ ದೃಷ್ಟಿಕೋನ ಇಟ್ಟುಕೊಂಡು ಪ್ರಧಾನಿ ಮೋದಿ ಜಿ ಅವರು ಪ್ರತಿ ತಿಂಗಳ ಕೊನೆಯ ಭಾನುವಾರದಂದು ಮನ್ ಕೀ ಬಾತ್ ಮುಖೇನ ಪ್ರತಿ ಮನೆಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ತಂದಿರುವ ಬಗ್ಗೆ ಮಾಹಿತಿ ನೀಡುವ ಜೊತೆಗೆ ಇನ್ನಷ್ಟು ಕಾರ್ಯಗಳಿಗೆ ಬೆಂಬಲ ದೊರಕಲಿ ಎಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ, ಮಂಡಲ ಅಧ್ಯಕ್ಷ ಬಲರಾಮ್, ಮುಖಂಡ ಎಸ್.ಡಿ.ದಿಲೀಪ್ ಕುಮಾರ್ , ನಿಕಟ ಪೂರ್ವ ಅಧ್ಯಕ್ಷ ಬೆಣಚಿಗೆರೆ ಪಂಚಾಕ್ಷರಿ, ನಂಜೇಗೌಡರು, ಅರೇಹಳ್ಳಿ ರಾಜಶೇಖರ್, ನಿತ್ಯಾನಂದ, ಸ್ವಾಮಿ, ನಾಗೇಶ್, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.





