ಗುಬ್ಬಿ : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗುಬ್ಬಿ ತಾಲೂಕು, ಇವರ ವತಿಯಿಂದ ಗುಬ್ಬಿಯಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿರುವ 23 ವರ್ಷಗಳ ಕಾಲ ಭಾರತೀಯ ಭೂಸೇನೆ 4 ಇಂಜಿನಿಯರ್ಸ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಿ, ಭಾರತೀಯ ಸೇನೆಯಿಂದ ಸೇವಾ ನಿವೃತ್ತಿ ಹೊಂದಿ, ಸ್ವಗ್ರಾಮ ಗುಬ್ಬಿಗೆ ಆಗಮಿಸುತ್ತಿರುವ ಬಿ.ಟಿ.ದಿವಾಕರ್ ರವರಿಗೆ ಅಭಿನಂದನಾ ಸಮಾರಂಭ ಮತ್ತು 3ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ಬೃಹತ್ ಮೆರವಣಿಗೆ ಮತ್ತು ಸ್ವಾಗತ ಸಂಭ್ರಮ ಕಾರ್ಯಕ್ರಮವನ್ನು ಡಿ. 2ರಂದು ಮಂಗಳವಾರ ಮಧ್ಯಾನ 12 ಗಂಟೆಗೆ ಎಸ್ಸಿಎಸ್ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಲೋಕೇಶ್ ಬಿದರೆ ತಿಳಿಸಿದ್ದಾರೆ.
ಡಿ.2ರಂದು ಒಂಬತ್ತು ಗಂಟೆಗೆ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಯ ದೇವಸ್ಥಾನದಿಂದ ಎಸ್ಸಿಎಸ್ ಕಲ್ಯಾಣ ಮಂಟಪದವರಿಗೆ ಬ್ಯಾಂಡ್ ಸೆಟ್ ಕಲಾತಂಡದೊಂದಿಗೆ ಮಾಜಿ ಸೈನಿಕರು, ತಾಲೂಕು ರೈತ ಸಂಘ, ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಸಂಘ, ಗುಬ್ಬಿ ತಾಲೂಕು ಮತ್ತು ಎನ್ ಸಿ ಸಿ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಗುಬ್ಬಿ ನಗರದ ಎಲ್ಲಾ ಸಂಘ-ಸಂಸ್ಥೆಗಳ ಪ್ರತಿನಿದಿಗಳು, ನಗರ ದೇಶಪ್ರೇಮಿಗಳು, ತಾಲೂಕು ಆಡಳಿತ ವರ್ಗ ಸಿಬ್ಬಂದಿ ವರ್ಗ ಮತ್ತು ಗುಬ್ಬಿ ಪಟ್ಟಣ ಪಂಚಾಯ್ತಿ ಎಲ್ಲಾ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರುಗಳೊಂದಿಗೆ ಭವ್ಯ ಮೆರವಣಿಗೆಯನ್ನು ಏರ್ಪಡಿಸಲಾಗಿದೆ.
ದಿವ್ಯ ಸಾನಿಧ್ಯವನ್ನು ತೋರೆಮಠದ ಪೀಠಾಧ್ಯಕ್ಷರಾದ ಶ್ರೀ ಅಟವಿ ಚನ್ನಬಸವಸ್ವಾಮಿಗಳು, ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನದ ಡಾ.ಬಸವಮಾಚಿದೇವ ಮಹಾಸ್ವಾಮಿಜಿಗಳು ವಹಿಸಿಕೊಳ್ಳುವರು. ಜಿಲ್ಲಾಧಿಕಾರಿ ಶುಭಕಲ್ಯಾಣ ಕಾರ್ಯಕ್ರಮ ಉದ್ಘಾಟಿಸುವರು, ಶಾಸಕ ಎಸ್ ಆರ್ ಶ್ರೀನಿವಾಸ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಲೋಕೇಶ್ ಬಿದರೆ, ಲೆಫ್ಟಿನೆಂಟ್ ಕರ್ನಲ್ ಅಭಿಲಾಶ್ ಎಸ್, ಡಾ. ಎನ್.ಕೆ. ಶಿವಣ್ಣ, ತಹಸೀಲ್ದಾರ್ ಬಿ.ಆರತಿ ಇತರರು ಆಗಮಿಸುವರು ಎಂದು ತಿಳಿಸಿದ್ದಾರೆ.





