ಗುಬ್ಬಿ: ಮಕ್ಕಳು ಮನಸ್ಸಿಟ್ಟು ಓದಬೇಕು, ಅರ್ಥವಾಗದ ಪಾಠದ ಬಗ್ಗೆ ಶಿಕ್ಷಕರನ್ನು ಕೇಳಿ ಸಮಸ್ಯೆ ಪರಿಹರಿಸಿಕೊಳ್ಳಬೇಕು  ಎಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ನ ಮಾಜಿ ನಿರ್ದೇಶಕ ಡಾ.ನಂದಿನಿಲಕ್ಷ್ಮೀಕಾಂತ್  ತಿಳಿಸಿದರು.

ಪಟ್ಟಣದ ಹೊರವಲಯದ ಚಿದಂಬರಾಶ್ರಮದಲ್ಲಿ ಸೇವಾ ಸದನ ಶಿಕ್ಷಣ ಸಂಸ್ಥೆಯಿಂದ ಏರ್ಪಡಿಸಿದ್ದ ಚಿದಂಬರ ಸಂಭ್ರಮ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಸಂಕಷ್ಟ ಬಂದಾಗ ಎದುರಿಸುವ ಗುಣವನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಉತ್ತಮ ಮೌಲ್ಯಯುತ ಶಿಕ್ಷಣ ಕಲಿಯಬೇಕು.  ಗುರುಕುಲದಲ್ಲಿ ಓದಿದ ಮಕ್ಕಳು ವಿದ್ಯಾವಂತರಾಗಿ ಉತ್ತಮವಾದ ಕೆಲಸ ಮಾಡುತ್ತಿದ್ದು ಹಾಗೂ ಸಮಾಜ  ಸೇವೆಯನ್ನು ಮಾಡುತ್ತಿದ್ದಾರೆ. ಆದರಿಂದ  ತಮ್ಮ ಮಕ್ಕಳನ್ನು ಆಶ್ರಮಗಳಿಗೆ ಸೇರಿಸಿ ಉತ್ತಮ ಮೌಲ್ಯಯುತಶಿಕ್ಷಣ  ಪಡೆದುಕೊಳ್ಳಲು ಅನುವು ಮಾಡಿಕೊಡಬೇಕು ಎಂದರು.

ಸೇವಾ ಸದನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸಚ್ಚಿದಾನಂದ ಶರ್ಮ ಮಾತನಾಡಿ,  ಶಿಕ್ಷಣದಿಂದ ಮಾತ್ರ ಮುಂದಿನ ಸಮಾಜ ನಿರ್ಮಾಣ ಸಾಧ್ಯ ಅದಕ್ಕಾಗಿ ವಿಶೇಷ ಶಿಕ್ಷಣ ಭಾರತೀಯ ಕಾಲಕ್ಕೆ ತಕ್ಕಂತೆ ಕನ್ನಡ ಇಂಗ್ಲಿಷ್ ಮಾಧ್ಯಮ ಅಳವಡಿಸಬೇಕು ಎಂಬ ಶಿವಚಿದಂಬರ ಸ್ವಾಮಿಗಳು ಆಶವನ್ನು ಈ ಆಶ್ರಮದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಈ ಆಶ್ರಮದಲ್ಲಿ ಮಕ್ಕಳಿಗೆ ವಿಶೇಷವಾಗಿ ಸನಾತನ ಸಂಸ್ಕೃತಿಯನ್ನು ಕಲಿಸುವ ಜೊತೆಗೆ  ಜೀವನ ಕೌಶಲ್ಯ ಶಿಕ್ಷಣವನ್ನು ನೀಡಲಾಗುತ್ತಿದೆ.

ಚಿದಂಬರಾಶ್ರಮದಲ್ಲಿ  ಉಚಿತ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಬಟ್ಟೆ, ಸಮವಸ್ತ್ರ, ಪುಸ್ತಕ, ಊಟ-ಉಪಾಹಾರ ಸೇರಿದಂತೆ ಅವರ ಶಿಕ್ಷಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಉಚಿತವಾಗಿ ವ್ಯವಸ್ಥೆ ಮಾಡುವ ಮೂಲಕ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ಮುಂಜಾನೆ ಐದು ಗಂಟೆಗೆ ಪ್ರಾರ್ಥನೆ, ನಂತರ ಸೂರ್ಯೋದಯಕ್ಕೆ ಮುನ್ನ ಸಂಧ್ಯಾವಂದನೆ, ಗಾಯತ್ರಿ ಮಂತ್ರದ ಜಪಾ ನಂತರ ವೇದಪಾಠ ಹೇಳಿಕೊಡಲಾಗುತ್ತದೆ ಎಂದು  ತಿಳಿಸಿದರು.

ಶಿಕ್ಷಣಾಧಿಕಾರಿ ಎಂ.ಎಸ್. ನಟರಾಜು ಮಾತನಾಡಿ, ಮಕ್ಕಳು ಶಿಕ್ಷಕರು ಪಾಠ ಮಾಡುವುದನ್ನು ಮನಸ್ಸಿಟ್ಟು ಕೇಳಿಸಿಕೊಂಡು ಮನೆಯಲ್ಲಿ ಅಭ್ಯಾಸ ಮಾಡಿದಾಗ ಅದು ಹೆಚ್ಚು ಜ್ಞಾಪಕದಲ್ಲಿ ಇರಲು ಸಾಧ್ಯವಾಗುತ್ತದೆ. ಅರ್ಥವಾಗದ ಪಾಠದ ಬಗ್ಗೆ ಶಿಕ್ಷಕರನ್ನು ಕೇಳಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ಉಪ ಮಹಾಪ್ರಬಂಧಕ ಕೆ.ಎಲ್. ಶೇಷಾದ್ರಿ, ಸೇವಾ ಸದನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ವಿ. ಲಕ್ಷ್ಮಿಕಾಂತ್‌, ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಸುಧೀಂದ್ರ, ಶ್ರೀಧರ್ ಮೂರ್ತಿ, ಹೋಲಿಸ್ಟಿಕ್ ಹೆಲ್ತ್ ಕೇರ್ ಸೆಂಟರ್ ಪ್ರಖ್ಯಾತ ವೈದ್ಯರಾದ ಡಾ. ಗಣಪತಿ, ಸಬ್ ಇನ್ಸ್ಪೆಕ್ಟರ್ ಸುನಿಲ್‌ಕುಮಾರ್‌,ಗ್ರಾಮ ಪಂಚಾಯತಿ ಸದಸ್ಯರಾದ ಗೋಪಿನಾಥ್‌, ಅರುಣಾಕುಮಾರಿ, ಪ್ರಾಶುಪಲರಾದ ಅನಂತರಾಮು, ಮುಖ್ಯಶಿಕ್ಷಕ ಎ.ಬಿ.ಜಗದೀಶ್, ಶಿಕ್ಷಕರಾದ ನಳಿನ,ನೇತ್ರಾವತಿ, ಕವಿತಾ, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಮತ್ತಿತರರು ಭಾಗವಹಿಸುವರು.

LEAVE A REPLY

Please enter your comment!
Please enter your name here