ಗುಬ್ಬಿ: ವಾರದಿಂದ ಸುರಿದ ಮಳೆಗೆ ತಾಲ್ಲೂಕಿನ ಕಸಬ ಹೋಬಳಿಯ ತೊರೆಹಳ್ಳಿ ಹತ್ತಿರ ಶಿಂಷಾ ನದಿಯ ತೊರೆಯಲ್ಲಿ ಬಿರುಸಾಗಿ ನೀರು ಹರಿಯುತ್ತಿರುವ ರಸ್ತೆಯ ಸೇತುವೆ ಮೇಲೆ ಕಾರು ಹಾಗೂ ಬೈಕ್ ಕೊಚ್ಚಿ ಹೋದ ಘಟನೆ ನಡೆದಿದೆ.
ತೊರೆಯ ನೀರಿನ ರಭಸಕ್ಕೆ ಸಂಚಾರ ಮಾಡುತ್ತಿದ್ದ ಕಾರು ಕೊಚ್ಚಿ ಹಳ್ಳಕ್ಕೆ ಹೋಗಿದೆ. ಚಾಲಕ ಕಾರು ಡೋರ್ ಓಪನ್ ಮಾಡಿ ಸ್ಥಳೀಯರ ನೆರವಿನಿಂದ ಕಾರು ಮಾಲೀಕ ಪರಮಣ್ಣ ಪ್ರಾಣಪಾಯದಿಂದ
ಪಾರಾಗಿದ್ದಾರೆ. ಇದೇ ಸಮಯದಲ್ಲಿ ಸ್ಥಳೀಯ ಯುವಕನೊಬ್ಬನ ಬೈಕ್ ಸಹ ಕೊಚ್ಚಿ ಹೋಗಿದೆ. ಸದ್ಯ ಯುವಕ ಹಾರಿ ಹೊರ ಬಂದಿದ್ದಾನೆ. ಈ ರೀತಿಯ ಸಮಸ್ಯೆ ಪ್ರತಿ ವರ್ಷ ನಡೆಯುತ್ತಲೇ ಇರುತ್ತದೆ. ಕಳೆದ ವರ್ಷ ಟ್ಯಾಕ್ಟರ್, ಕಾರು ಕೊಚ್ಚಿ ಹೋಗಿತ್ತು. ಮೂವತ್ತು ವರ್ಷದಿಂದ ಸಮಸ್ಯೆಗೆ ಪರಿಹಾರ ಕೇಳಿ ಬೇಸತ್ತಿದ್ದೇವೆ ಎಂದು ಸ್ಥಳೀಯ ಗ್ರಾಪಂ ಮಾಜಿ ಅಧ್ಯಕ್ಷ ರಂಗನಾಥ್ ಹೇಳುತ್ತಾರೆ. ತೊರೆಹಳ್ಳಿ ತೊರೆಗೆ ಅಗತ್ಯ ಸೇತುವೆ ನಿರ್ಮಾಣಕ್ಕೆ ಕಳೆದ ಮೂರು ಎರಡು ದಶಕದ ಬೇಡಿಕೆ ಇದ್ದರೂ ಇಲ್ಲಿನ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ವರ್ಷದ ಆರು ತಿಂಗಳು ಸೇತುವೆ ರಸ್ತೆ ಬಂದ್ ಆಗುತ್ತದೆ. ಹರಿಯುವ ನೀರಿನಲ್ಲಿ ಸರ್ಕಸ್ ಮಾಡಿದರೆ ವಾಹನ ಕೊಚ್ಚಿ ಹೋಗುವುದು ಗ್ಯಾರಂಟಿ. ಇಲ್ಲಿನ ಸಮಸ್ಯೆಗೆ ಪರಿಹಾರಕ್ಕೆ ಶಾಸಕರು ಹಾಗೂ ಸಂಸದರ ಗಮನಕ್ಕೆ ತಂದಿದ್ದರೂ ಸೂಕ್ತ ಪರಿಹಾರ ಸಿಕ್ಕಿಲ್ಲ. ರೈತರ ಕೃಷಿ ಚಟುವಟಿಕೆಗೆ ತೀವ್ರ ಸಮಸ್ಯೆ ಎದುರಾಗಿದೆ. ತೊರೆ ಹಳ್ಳಕ್ಕೆ ಮೇಲ್ವೇತುವೆ ಅವಶ್ಯವಿದೆ.
ಗುಬ್ಬಿ ಪಟ್ಟಣಕ್ಕೆ ತೊರೆಹಳ್ಳಿ ಗ್ರಾಮಸ್ಥರು ಹೋಗಲು ಹೊಸಹಳ್ಳಿ ಮೂಲಕ 8 ಕಿಮೀ ಅಧಿಕವಾಗಿ ಸುತ್ತುವರಿದು ಹೋಗಬೇಕಿದೆ. ಕಡಬ ಗ್ರಾಮಕ್ಕೆ ತೆರಳುವ ಈ ಮಾರ್ಗ ಬಂದ್ ಆಗುತ್ತದೆ. ಹೊನ್ನಶೆಟ್ಟಿಹಳ್ಳಿ ಯಡವನಹಳ್ಳಿ ಮಾರ್ಗ ಕೂಡಾ ಬಂದ್ ಆಗುತ್ತದೆ. ಈ ಸಮಸ್ಯೆ ಪ್ರತಿ ಮಳೆಗಾಲದಲ್ಲಿ ಕಂಡರೂ ಅಧಿಕಾರಿಗಳು ಪ್ರತಿನಿಧಿಗಳು ಜಾಣ ಮೌನ ವಹಿಸಿದ್ದಾರೆ ಎಂದು ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.





