
ಗುಬ್ಬಿ : ಮುಂದಿನ ದಿನಮಾನಗಳಲ್ಲಿ ಅಡಿಕೆ ಬೆಳೆ ಹೆಚ್ಚಾಗಿ ಬೆಲೆ ಕುಸಿಯುವ ಸಾಧ್ಯತೆ ಇದ್ದು ಅದನ್ನ ಸರಿದೂಗಿಸಿಕೊಳ್ಳಲು ಅಂತರ ಬೆಳೆ ಬೆಳೆಯಬೇಕು ಎಂದು ಸಂಪನ್ಮೂಲ ವ್ಯಕ್ತಿ ರಾಮಚಂದ್ರ ಹೆಗ್ಗಡೆ ತಿಳಿಸಿದರು.
ತಾಲ್ಲೂಕಿನ ಹೊಸಕೆರೆ ಶ್ರೀಲಕ್ಷ್ಮಿರಂಗನಾಥಸ್ವಾಮಿ ಸಮುದಾಯ ಭವನದಲ್ಲಿ ಮಂಗಳವಾರ ತೋಟಗಾರಿಕಾ ಇಲಾಖೆಯಿಂದ ಆಯೋಜಿಸಿದ್ದ ತೆಂಗು ಮತ್ತು ಮಾವು ಬೆಳೆಯಲ್ಲಿ ರೋಗ, ಕೀಟಗಳ ನಿಯಂತ್ರಣ ಮತ್ತು ವೈಜ್ಞಾನಿಕ ಬೇಸಾಯ ಕ್ರಮಗಳು, ಹಾಗೂ ಜೇನು ಕೃಷಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರುಅಡಿಕೆ ಮಾನವನಿಗೆ ಅವಶ್ಯವಾದ ಆಹಾರವಲ್ಲ, ಅದ್ದರಿಂದ ಅಡಿಕೆಯಲ್ಲಿ ಅಂತರ ಬೆಳೆಗಳಾಗಿ ಕೊಕೊ, ಪಪ್ಪಾಯಿ, ನುಗ್ಗೆ, ಮೆಣಸು ಮುಂತಾದ ಬೆಳೆಗಳನ್ನ ಬೆಳೆದು ಆದಾಯವನ್ನು ಗಳಿಸಿಕೊಳ್ಳಭೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಣುಕಯ್ಯ ಮಾತನಾಡಿ ಅಡಿಕೆ ಹಾಗೂ ತೆಂಗಿನ ಮರಗಳಿಗೆ ರೋಗ ಬರದಂತೆ ನೋಡಿಕೊಳಬೇಕು.ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ವು ತೆಂಗಿನಮರಗಳು ರೋಗದಿಂದ ಬಳಲುತ್ತಿದ್ದು ತೋಟಗಾರಿಕಾ ಇಲಾಖೆಯವರು ರೈತರ ಜಮೀನಿಗೆ ಹೋಗಿ ಎಲ್ಲಿ ತೆಂಗಿಗೆ ರೋಗ ಬಂದಿದೆಯೋ ಅಂತಹ ರೈತರನ್ನು ಸಂಪರ್ಕಿಸಿ ರೈತರಿಗೆ ಮಾಹಿತಿ ನೀಡಬೇಕು ಎಂದರು. ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಬರುವ ಸೌಲಭ್ಯಗಳನ್ನು ಅಧಿಕಾರಿಗಳು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸಬೇಕು ಎಂದು ತಿಳಿಸಿದರು.
ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಕೀರ್ತಿಶಂಕರ್ ಮಾತನಾಡಿ, ತೋಟಗಾರಿಕಾ ಬೆಳೆಗಳಾದ ಮಾವು, ಅಡಿಕೆ, ತೆಂಗು ಇವುಗಳಿಗೆ ಬರುವ ರೋಗಗಳು ಹಾಗೂ ಹತೋಟಿ ಕ್ರಮಗಳನ್ನು ತಿಳಿಸಿದರು.
ಜೀನು ತರಬೇತಿದಾರ ಶ್ರೀಧರ್ ಮಾತನಾಡಿ ಜೇನು ಸಾಕಾಣಿಕೆಯಿಂದ ಬೆಳೆಗಳಲ್ಲಿ ಹೆಚ್ಚು ಇಳುವರಿ ಕಾಣಲು ಸಾಧ್ಯವಾಗುತ್ತದೆ. ಆದ್ದರಿಂದ ರೈತರು ಜೇನು ಸಾಕಾಣಿಕೆಯಲ್ಲಿ ಮುಂದಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಾರ್ವತಮ್ಮ , ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರಾದ ಎ.ಎಸ್.ಪುಷ್ಪಲತಾ. ಚೇಳೂರು, ಹಾಗಲವಾಡಿ ಹೋಬಳಿಯ ಸಹಾಯಕ ತೋಟಗಾರಿಕಾ ಅಧಿಕಾರಿಯಾದ ಪಿ.ಕೆ ನಿಶ್ಚಯ್, ಕೆ.ಜಿ.ಮಂಜುನಾಥ್. ಜಗದೀಶ್ ಪಾಟೀಲ್, ಪಿಡಿಓ ರಾಜೇಂದ್ರಪ್ರಸಾದ್, ಕೃಷಿಕ ಸಮಾಜದ ಉಪಾಧ್ಯಕ್ಷ ಸದಾಶಿವಯ್ಯ , ನಿರ್ದೇಶಕ ಶಿವಲಿಂಗಯ್ಯ, ಕಾರ್ಯದರ್ಶಿ ಚಂದ್ರಶೇಖರ್, ರೈತ ಸಂಘದ ಕಾರ್ಯದರ್ಶಿ ಅರೇಹಳ್ಳಿ ಮಂಜುನಾಥ್ ,ಕೃಷ್ಣಜಟ್ಟಿ ಗ್ರಾಮಪಂಚಾಯಿತಿ ಸದಸ್ಯೆ ಕಮಲಮ್ಮ, ಎಕೆಪಿ ರಾಜು, ಗುರುದತ್, ಬಿಟಿ ಗಿರೀಶ್ ಕುಮಾರ್, ರೈತರು ಭಾಗವಹಿಸಿದ್ದರು.





