ಗುಬ್ಬಿ : ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬೆಣಚಿಗೆರೆ ಬಿ.ಎಸ್.ಪಂಚಾಕ್ಷರಿ ಹಾಗೂ ಉಪಾಧ್ಯಕ್ಷರಾಗಿ ಹಾಗಲವಾಡಿ ಜಯಪ್ರಕಾಶ್ ಅವಿರೋಧ ಆಯ್ಕೆಯಾದರು.
ಟಿಎಪಿಸಿಎಂಎಸ್ ಕಚೇರಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಕೆ.ಎಚ್.ಮಹಂತೇಶಯ್ಯ ನಡೆಸಿಕೊಟ್ಟರು. ಒಟ್ಟು 15 ನಿರ್ದೇಶಕರ ಸಮ್ಮುಖದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ಏಕೈಕ ನಾಮಪತ್ರ ಸಲ್ಲಿಸಿದ್ದ ಪಂಚಾಕ್ಷರಿ ಹಾಗೂ ಜಯಪ್ರಕಾಶ್ ಪ್ರತಿಸ್ಪಧಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ನೂತನ ಅಧ್ಯಕ್ಷರಾದ ಬಿ.ಎಸ್.ಪಂಚಾಕ್ಷರಿ ಮಾತನಾಡಿ ಕೃಷಿಕ ವರ್ಗದ ಹಿತ ಕಾಯುವ ಜೊತೆಗೆ ಈ ಸಹಕಾರ ಸಂಘವನ್ನು ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಳಿ ಪ್ರಭಣ್ಣ ಮಾತನಾಡಿ, ಪಕ್ಷಾತೀತ ನಿಲುವು ಸಹಕಾರ ಕ್ಷೇತ್ರದಲ್ಲಿ ಮೊದಲಿನಿಂದಲೂ ಕಂಡಿದೆ. ಆದರೆ ಈ ಬಾರಿ ಚುನಾವಣೆಯಲ್ಲಿ ಸ್ವಲ್ಪ ರಾಜಕಾರಣ ಕಂಡು ಬಂತು. ಆದರೂ ಮತದಾರರು ಆಯ್ಕೆ ಮಾಡಿದ ನಿರ್ದೇಶಕರು ರೈತರ ಪರ ನಿಲ್ಲುತ್ತಾರೆ ಸರ್ಕಾರ ಹಾಗೂ ಸಹಕಾರ ಇಲಾಖೆಯ ಸಹಾಯ ಪಡೆದು ಕೆ.ಎನ್.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಸಂಘವನ್ನು ಹೆಚ್ಚಿನ ರೀತಿಯಲ್ಲಿ ಉನ್ನತಗೊಳಿಸುವ ಕೆಲಸ ಎಲ್ಲರು ಒಗ್ಗೂಡಿ ಮಾಡುತ್ತೇವೆ ಎಂದರು.
ನೂತನ ಉಪಾಧ್ಯಕ್ಷ ಜಯಪ್ರಕಾಶ್ ಮಾತನಾಡಿ ಕೆಲ ನಿರ್ದೇಶಕರ ಆಯ್ಕೆ ಅವಿರೋಧ ಹಾಗೂ ಕೆಲ ಸದಸ್ಯರ ಆಯ್ಕೆ ಮತದಾನ ಮೂಲಕ ನಡೆದಿದೆ. ಆದರೆ ನಂತರದಲ್ಲಿ ಯಾವ ಗೊಂದಲವಿಲ್ಲದೆ ಅವಿರೋಧವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಈ ಸ್ಥಾನಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಿರ್ದೇಶಕರಾದ ನಟರಾಜು, ಕೆ.ಆರ್.ಬಸವರಾಜು, ಜಿ.ಯತೀಶ್, ಸಿ.ಎಂ.ಹಿತೇಶ್, ರಾಮಚಂದ್ರ, ಜಗದೀಶಯ್ಯ, ಲಕ್ಷ್ಮೀನಾರಾಯಣ್, ಎನ್.ಸಿ.ಗಿರೀಶ್, ವೈ.ಜಿ.ತ್ರಿನೇಶ್, ಕೆ.ಎನ್.ಸವಿತಾ, ಎಸ್. ವಸಂತ ಸಹಕಾರ ಸಂಘಗಳ ಸಹಾಯಕ ನಿಬಂಧಕ ಓಬಳೇಶ್, ಸಹಕಾರ ಯೂನಿಯನ್ ನಿರ್ದೇಶ ಜಿ. ಡಿ.ಸುರೇಶಗೌಡ, ಸಂಘದ ಕಾರ್ಯದರ್ಶಿ ಎಸ್.ವಿ.ಶ್ರೀನಾಥ್, ಮುಖಂಡರಾದ ಎಚ್.ಟಿ.ಭೈರಪ್ಪ, ಯತೀಶ್, ಸಿದ್ದರಾಮಯ್ಯ ಉಮೇಶ್, ಜಿ.ಆರ್.ಪ್ರಕಾಶ್, ಡಿ.ರಘು, ಅರ್ಜುನ್, ಅನಿಲ್, ಅರೇಹಳ್ಳಿ ರಾಜು ಸೇರಿದಂತೆ ಸಂಘದ ಎಲ್ಲಾ ಸಿಬ್ಬಂದಿಗಳು ಇದ್ದರು.





